ಕೃಷ್ಣದೇವರಾಯನ ಆಳ್ವಿಕೆಯಿಂದ ಶುರುವಾಗುವ ಈ ಸಂಪುಟ ಅಳಿಯ ರಾಮರಾಯನ ಸರ್ವಾಧಿಕಾರ, ಅವನ ಅಹಂಕಾರ, ಶೌರ್ಯ, ದರ್ಪದ ಗಾಥೆಯನ್ನು ಚೆನ್ನಾಗಿ ಸೆರೆ ಹಿಡಿದು ಸಾಮ್ರಾಜ್ಯದ ಅವಸಾನದ ಕಥೆಯನ್ನು ಹೇಳಿ, ನಂತರ ಅರವೀಡುಗಳು ಹೇಗೆ ಸಾಮ್ರಾಜ್ಯ ಪುನಃ ಕಟ್ಟುವಲ್ಲಿ ಸೋತರು ಎಂಬ ಕಥೆಯವರೆಗೂ ಸಾಗಿ ಅಂತ್ಯಗೊಳ್ಳುತ್ತದೆ. ಈ ಸಂಪುಟಕ್ಕೆ ಸಿಗುವ ಇತಿಹಾಸ ಮೂಲಗಳು ಮೊದಲನೇ ಸಂಪುಟಕ್ಕೆ ಸಿಗುವ ಮೂಲಗಳಿಗಿಂತ ಹೆಚ್ಚು. ಹಾಗಾಗಿ ಇಲ್ಲಿನ ಐತಿಹಾಸಿಕ ಸಂದರ್ಭಗಳು ಸತ್ಯಕ್ಕೆ ಹತ್ತಿರ ಎನ್ನಬಹುದು. ಆದರೆ ಸಮಸ್ಯೆ ಇರುವುದು ಆ ಭಾಷೆಯ ಉದ್ವೇಗದಲ್ಲಿ, ಆ subtle ಭಾವವಿಲ್ಲ, ಎಲ್ಲವನ್ನು ವೈಭವಿಕರಿಸಿ ಹೇಳುವ ಅಗತ್ಯವಿಲ್ಲ, ಸೋಲನ್ನು ಗೆಲುವಿನ ಭಾವದಲ್ಲಿ ಹೇಳುವುದು ಲೇಖಕ ಓದುಗನಿಗೆ ಮಾಡುವ ದೊಡ್ಡ ಮೋಸಗಳಲ್ಲಿ ಮುಖ್ಯವಾದದ್ದು
ಈ ಸಂಪುಟವೂ, ಕಾದಂಬರಿಗಳಲ್ಲಿ ತರಬಹುದಾದ ನಾಟಕೀಯ ಘಟನಾವಳಿಗಳಿಂದ ತುಂಬಿವೆ, ಅದನ್ನು ಎಷ್ಟು ಅದ್ಭುತವಾಗಿ ಹಲವಾರು ಕೋನಗಳಲ್ಲಿ ಹೇಳಬಹುದಿತ್ತು, ಕಾದಂಬರಿ ಪ್ರಕಾರಕ್ಕೆ ಆ ಸ್ವಾತಂತ್ರವೂ ಇತ್ತು, ಏಕೋ ಕೃಷ್ಣರಾಯರು ರಕ್ಷಣಾತ್ಮಕ ಆಟವನ್ನು ಆಡಿದ್ದಾರೆ, ಉದಾಹರಣೆಗೆ ಕೆಳಗಿನ ಸಂದರ್ಭಗಳನ್ನು ಗಮನಿಸಿ
1. ಕೃಷ್ಣದೇವರಾಯನ ಪುತ್ರನ ಜೀವಹರಣ - ಇದರಲ್ಲಿ ತಿಮ್ಮರಸುವಿನ ಪಾತ್ರವೇನಿರಬಹುದು?
2. ಕೃಷ್ಣದೇವರಾಯನ ಇತರ ಪತ್ನಿಗಳು ಹೇಗೆ ತನ್ನ ಸವತಿಯ ಪುತ್ರನನ್ನು ಯುವರಾಜರಾಗಿ ಒಪ್ಪಿಕೊಂಡರು, ಅಲ್ಲಿನ ತಾಕಲಾಟ ಹೇಗಿತ್ತು
3. ಅಳಿಯ ರಾಮರಾಯ ಸರ್ವಾಧಿಕಾರಿಯಾಗಿ ಆಳುತ್ತಿರುವಾಗ ಸದಾಶಿವರಾಯರ ಮತ್ತು ಕೃಷ್ಣದೇವರಾಯನ ಬೆಂಬಲಿಗರು ಖಂಡಿತವಾಗಿಯೂ ಪ್ರತಿರೋಧ ಮಾಡಿರಬಹುದಲ್ಲವೇ
4. ತಿರುಮಲರಾಯ ಸದಾಶಿವನನ್ನು ಕೊಂದು ಪೆನುಕೊಂಡದಲ್ಲಿ ಸಾಮ್ರಾಜ್ಯಧಿಪತಿ ಆದಾಗ ಅಲ್ಲಿ ನಡೆದ ಸಂಘರ್ಷ ಹೇಗಿದ್ದಿರಬಹುದು
5. ವೈಷ್ಣವ ಮತ್ತು ಶೈವರ ತಾಕಲಾಟ ಸಾಮ್ರಾಜ್ಯದ ಮೇಲೆ ಮಾಡಿದ ಪ್ರಭಾವ ಏನು
6. ಅಲಿ ಆದಿಲ್ ಶಾನನ್ನು ಅಳಿಯ ರಾಮರಾಯ ತನ್ನ ಮಗ ಎಂದು ಒಪ್ಪಿಕೊಂಡಾಗ, ವಿಜಯನಗರ ಸಾಮ್ರಾಜ್ಯದಂತ ಹಿಂದೂ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲವೇ ನಡೆದಿರಬೇಕು.
ಇವು ಯಾವುವು ಇಲ್ಲಿ ಚರ್ಚೆಯೇ ಆಗಿಲ್ಲ, ಸಾಮ್ರಾಜ್ಯದಲ್ಲಿ ಎಲ್ಲವೂ ಸರಿಯಿತ್ತು, ಎಲ್ಲೂ ಹುಳುಕೇ ಇರಲಿಲ್ಲ ಎಂಬಂತೆ ಬರೆದಿರುವುದು ಹಾಸ್ಯಸ್ಪದ.
ಇನ್ನೂ ಕೃಷ್ಣದೇವರಾಯನನ್ನು ನಾವು ಕನ್ನಡ ರಾಜನಂತೆ ಗರ್ವದಿಂದ ನೋಡುತ್ತೇವೆ, ಆದರೆ ಆತನ ಒಲವು ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಕಡೆ ಇದ್ದದ್ದು ಕಾಣಬಹುದು, ಆತನ "ಆಮುಕ್ತ ಮೌಲ್ಯ" ಕೃತಿಯ ಈ ಕೆಳಗಿನ ಸಾಲುಗಳನ್ನು ಗಮನಿಸಿ
"ಕನ್ನಡರಾಯನಾದ ನಿನ್ನನ್ನು ತೆಲುಗಿನಲ್ಲಿಯೇ ಬರೆಯುವಂತೆ ಪ್ರೇರೇಪಿಸಲು ಕಾರಣವೇನೆಂದರೆ ನಾನು ಆಂಧ್ರದೇಶದ ಪರಮಾರಾದ್ಯಮೂರ್ತಿ - ಆಂಧ್ರ ವಲ್ಲಭ, ಆಂಧ್ರ ವಿಷ್ಣು, ನೀಗೆದ್ದು ಬಂದಿರುವ ಈ ದೇಶವೆಲ್ಲ ಆಂಧ್ರದೇಶ. ಸರ್ವಸಾಮಂತರಾಜರುಗಳಿಂದಲೂ ಸೇವಿತನಾದ ನೀನು ಬಹುಭಾಷಾ ಪ್ರವೀಣನಾದ ನೀನು ದೇಶಭಾಷೆಗಳಲ್ಲಿ ತೆಲುಗುಭಾಷೆಯೇ ಶೇಷ್ಠವೆಂದು ಬಲ್ಲೆ."
ಸಂಗಮ ಸಂತತಿ ನಂತರ ಬಂದ ಸಾಳುವ ಮತ್ತು ಅರವೀಡು ಸಂತತಿಗಳು ಕನ್ನಡವನ್ನು ಕಡೆಗಣಿಸಿ ತೆಲುಗಿಗೆ ಪ್ರಾಮುಖ್ಯತೆ ಕೊಟ್ಟಿದ್ದು ಕಾದಂಬರಿಗಳ ಯಾವ ಭಾಗಗಳಲ್ಲೂ ಚರ್ಚೆಯಾಗಿಲ್ಲ.
ಆದರೂ, ಒಂದು ಸಾಮ್ರಾಜ್ಯದ ಇತಿಹಾಸದ ಮೇಲೆ 1266 ಪುಟಗಳಷ್ಟು ವಿಶಾಲವಾಗಿ ಬರೆಯುವುದು ಸಾಮಾನ್ಯದ ಕೆಲಸವೂ ಅಲ್ಲ, ವಿಜಯನಗರ ಸಾಮ್ರಾಜ್ಯದ ಇತಿಹಾಸದ ಒಂದು ಸುಲಭ ಪ್ರವೇಶಕ್ಕೆ ಈ ಸಂಪುಟಗಳನ್ನು ಓದಬಹುದು.