ಕ್ರೈಂ ! ಒಮ್ಮೆ ಆ ಲೋಕಕ್ಕೆ ಕಾಲಿಟ್ಟ ಮನುಷ್ಯ ಅದರಿಂದ ಹಿಂದೆ ಸರಿಯುವುದು ಅತೀ ವಿರಳ. ಕ್ರೈಂ ಅಷ್ಟೊಂದು ಅಡ್ಡಿಕ್ಟಿವೋ ಅಥವಾ ಸಭ್ಯ ಸಮಾಜ ತಮ್ಮನ್ನು ಮತ್ತೆ ಒಳ ಸೇರಿಸಿಕೊಳ್ಳುವುದಿಲ್ಲ ಎಂಬ ಮನೋಭಾವನೆಯೋ ? ಅಂತೂ ಒಮ್ಮೆ ಕ್ರಿಮಿನಲ್ ಕೆಲಸ ಮಾಡಿದವರು ಅದನ್ನು ನಿರಂತರವಾಗಿ ನಡೆಸುತ್ತಾ ಹೋಗುತ್ತಾನೆ. ಅದು ಕೊಲೆ ಇರಬಹುದು. ಅತ್ಯಾಚರದಂತ ವಿಕೃತಿಯೂ ಇರಬಹುದು.ಕೊನೆಗೆ ಸಿಕ್ಕಿಬಿದ್ದು ಮರಣದಂಡನೆಗೆ ಈಡಾಗೀ ಸಾವನ್ನೇ ಎದುರು ನೋಡುತ್ತಾ ದಿನಗಳೆಯುತ್ತಾರೆ ! . ಮರಣದಂಡನೆಗೆ ಗುರಿಯಾಗಿ, ಕೊನೆಗಾಲವನ್ನು ನಿರೀಕ್ಷಿಸುವ ಕ್ರಿಮಿನಲ್ ಖೈದಿಗಳ ಮನಸ್ಥಿತಿ ಹೇಗಿರಬಹುದು? ಮಾಡಿದ ಕೃತ್ಯಗಳ ನೆನೆದು ‘ಅಯ್ಯೋ ! ಇದೆಂತ ಕೆಲಸ ಮಾಡಿಬಿಟ್ಟೆ ?!' ಎಂದು ಹಲುಬುತ್ತಾರೆಯೋ ? ಅಥವಾ ಯಾವುದೇ ಪಶ್ಚಾತ್ತಾಪಗಳಿಲ್ಲದೆ ‘ನಾನು ತಪ್ಪೇ ಮಾಡಿಲ್ಲ, ಸುಮ್ಮನೆ ಶಿಕ್ಷೆ ವಿಧಿಸಿದ್ದಾರೆ ’ ಎಂದು ಕಾನೂನನ್ನು ಶಪಿಸುತ್ತಾರೋ ? . ನಿವೃತ್ತ ಐಪಿಎಸ್ ಅಧಿಕಾರಿ ಡಾ.ಡಿವಿ ಗುರುಪ್ರಸಾದ್ ಅವರು ಬರೆದಿರುವ ಈ ಪುಸ್ತಕದಲ್ಲಿ ೧೫ ಕ್ರಿಮಿನಲ್ ಗಳ ರಕ್ತಸಿಕ್ತ ಕ್ರೈಂಗಳ ಹಿಸ್ಟರಿ ಇದೆ. ಕೈದಿಗಳನ್ನು ಜೈಲಿನಲ್ಲಿ ಸಂದರ್ಶಿಸಿ ಅವರ ಮನವನ್ನು ಅರಿಯುವ ಈ ಪ್ರಯತ್ನ ನಿಜಕ್ಕೂ ನೂತನ ಹಾಗೂ ವಿಶಿಷ್ಟ.ಪ್ರತಿಯೊಬ್ಬ ಖೈದಿಯನ್ನು ಸಂದರ್ಶನ ಮಾಡಿ ರಚಿಸಿರುವ ಈ ಪುಸ್ತಕದಲ್ಲಿ ಲೇಖಕರು ಅಪರಾಧಿಗಳ ಮನಸಿನ ಒಳಸುರುಳಿಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಪಾಪಿಗಳ ಲೋಕಕ್ಕೆ ಕ್ಷ ಕಿರಣವನ್ನು ಬೀರಿದ್ದಾರೆ. ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡಲಾಗದ ಪುಸ್ತಕವಿದು !