ಬಹುಷಃ ಅ.ನ.ಕೃ ರವರು ಬರೆದಿರುವ ದೀರ್ಘ ಕಾದಂಬರಿ ಇದೇ ಇರಬಹುದು. 754 ಪುಟಗಳ ತುಂಬು ಬರವಣಿಗೆ. ಒಬ್ಬ ಗುಮಾಸ್ತನ ಮಗ ನಾಟಕಗಳಲ್ಲಿ ನಟನಾಗಿ ಗೆದ್ದು ಸೋಲುವ ಕಥೆ ಇದು.
ನಾಟಕ ಪ್ರಪಂಚದ ಕೀಳು ಸಾಹಿತ್ಯ ಮತ್ತು ಕೀಳು ಸಂಭಾಷಣೆಯಿಂದ ಕೂಡಿರುವದನ್ನು ಕಾಣುವ ರಾಜ, ಈ ಕೀಳು ಪರಂಪರೆಯನ್ನು ತೊಳೆಯಲು ಹಲವಾರು ಮಾರ್ಪಡುಗಳನ್ನು ಮಾಡುತ್ತಾನೆ, ಗೆಲ್ಲುತ್ತಾನೆ. ನಟಸಾರ್ವಭೌಮನಾಗಿ ವಿರಾಜಿಸುತ್ತಾನೆ. ಇದರ ಜೊತೆಗೆ ನಟನು ವ್ಯವಕ್ತಿಕ ಜೀವನದ ಏರು ಪೇರಿನ ಆಟದಲ್ಲಿ ಸಿಲುಕಿ ನಲುಗುತ್ತಾನೆ. ಕಾಮ ಪ್ರೇಮದ ವ್ಯತ್ಯಾಸವನ್ನು ತಿಳಿಯಲು ಹಲವಾರು ಸಂಬಂಧಗಳ ಮೊರೆ ಹೋಗುತ್ತಾನೆ. ಒಂದೊಂದು ಸಂಬಂಧಕ್ಕೂ ಒಂದೊಂದು ಪಾಠ ಕಲಿಯುತ್ತಾನೆ.
ನನಗೆ ಈ ಕಾದಂಬರಿಯಲ್ಲಿ ಬಹಳ ಇಷ್ಟವಾದ ಭಾಗಗಳೆಂದರೆ ಹಲವಾರು ನಾಟಕಗಳ ಸಂಕ್ಷಿಪ್ತ ವಿವರಣೆ ಮತ್ತು ವಿಮರ್ಶೆ, ಇಲ್ಲಿ ಲೇಖಕರು ಶಾಕುಂತಲ, ಹ್ಯಾಮ್ಲೆಟ್, ಓಥೋಲೊ, ಶೂರಸೇನ ಚರಿತ್ರೆ, ಭರತೇಶ ವೈಭವ, ರಾಧಾ ಕೃಷ್ಣನ ಕಥೆ, ಭಾರತ, ರಾಮಾಯಣ, ಗಿರಿಜಾ ಕಲ್ಯಾಣ, ತಾಜ್ಮಹಲ್, ಆಚಾರ್ಯ ಚಾಣಕ್ಯ, ಮೃಚ್ಛಕಟಿಕ, ರಾಮವರ್ಮ ಲೀಲಾವತಿ, ಹೀಗೆ ಸಾಲು ಸಾಲು ನಾಟಕಗಳ ಪರಿಚಯ ಮತ್ತು ಭಿನ್ನ ನೋಟಗಳ ಪರಿಚಯ ನಮಗೆ ಸಿಗುತ್ತಾ ಹೋಗುತ್ತದೆ. ನಾಟಕ ಪ್ರಪಂಚ ಬೆಳೆದು ಬಂದ ರೀತಿಯನ್ನು ಕಟ್ಟಿಕೊಡುವ ಪರಿ ಇಷ್ಟವಾಗುತ್ತದೆ.
ಲೇಖಕರ ವಿಚಾರಗಳು ಕೂಡ ಕಾದಂಬರಿಯ ಉದ್ದಗಲಕ್ಕೂ ವಿನಿಮಯವಾಗಿದೆ. ಅ.ನ.ಕೃ ರವರ ಕನ್ನಡ ಪ್ರೇಮ ಮತ್ತು ಜಾತ್ಯತೀತ ವಿಚಾರಗಳು ಹಲವಾರು ಪಾತ್ರಗಳ ಮೂಲಕ ಧ್ವನಿಗೂಡಿವೆ.
ಅಸ್ವಾಭಾವಿಕ ಪಾತ್ರ ಪೋಷಣೆ, ಕೆಲ ಅಪೂರ್ಣ ಉಪಕಥೆಗಳು, ಕೆಲ ಕೃತಕ ಸನ್ನಿವೇಶಗಳು ಪುಸ್ತಕದ ಹಿರಿಮೆಯನ್ನು ತಗ್ಗಿಸಿದೆ.