Sattu is a socio-philosophical novella written by Karanam Pavan Prasad. It examines the attitude of Human beings, outside of space-time and inside the soul and intellect in a very precise way. And so the writer tries to assimilate the existence of the time and attitude of Human beings, against the backdrop of a family of the elite urbanscape.
Karanam Pavan Prasad, a Kannada novelist and playwright from Bangalore, is celebrated for his distinctive storytelling that combines new-age perspectives with themes of urban ecology, identity, and faith. Transitioning from a successful theater career, he gained widespread acclaim with novels like Karma, Nunni, Grastha, Rayakonda, and Sattu, each exploring complex societal and philosophical themes. solidifying his place as a prominent voice in contemporary Kannada literature.
2.30 ಮಧ್ಯರಾತ್ರಿ ಮಾಪುಟೋಗೆ ಫ್ಲೈಟ್, ಎಲ್ಲ ತಗೊಂಡ್ನ ಅಂತ ಯೋಚ್ನೆ ಮಾಡ್ತಾ ಕೂತಿದ್ದಾಗ, ಕಪಾಟಿನಲ್ಲಿ ಸತ್ತು ಪುಸ್ತಕ ಕಂಡ್ತು... ಅರೇ, ಇಥಿಯೋಪಿಯಾ ರೀಚ್ ಆಗೋಷ್ಟ್ರಲ್ಲಿ ಓದ್ಬೋದು ಅನ್ಸ್ತು , ಎತ್ತಾಕ್ಕೊಂಡೆ. ಚೆಕ್ ಇನ್ ಆಗಿ, ಬ್ಯಾಗೆಜ್ ತಗೊಂಡು, ಇಮ್ಮಿಗ್ರೇಷನ್ ಮಾಡ್ಸಿ, ಫ್ಲೈಟ್ ಬರೋ ಗೇಟ್ ಹತ್ರ ಕೂತು ಪುಸ್ತಕ ತೆರೆದೆ.... ಛೇ ಛೇ ಫ್ಲೈಟ್ ಲೇಟ್ ಆಗ್ಲಪ್ಪ ದೇವ್ರೇ ಅಂತ ಬೇಡಿಕೆ ನಂದು... ಪುಸ್ತಕದ ಫ್ಲೋ ಹೋಗ್ಬಾರ್ದು ಅನ್ನೋ ಹಂಬಲ... ಶೌಚಕ್ಕೂ ಹೋಗೋ ಮನ್ಸಿಲ್ಲ. ಸತ್ತು ಓದ್ಕೊಳ್ತ ಕೂತ್ರೆ ಸತ್ತೇ ಹೋಗ್ತೀನಿ ಅಂತ ಒಲ್ಲದ ಮನಸ್ಸಿಂದಲೇ ಫ್ಲೈಟ್ ಹತ್ತಿದೆ. ಬೇಗ ಬ್ಯಾಗೇಜ್ ಕ್ಯಾಬಿನ್ನಲ್ಲಿ ಇಟ್ಟು ಓದೋಕೆ ಕೂತೆ. 5 ಪುಟ ಆಯ್ತೋ ಇಲ್ವೋ ಲೈಟ್ ಆಫ್ ಮಾಡೋದೇ... ಥತ್ತೇರಿಕೆ ಅನ್ಕೊಂಡು ಪುಸ್ತಕ ಮುಚ್ಚಿ ಕೂತೆ. ಇಥಿಯೋಪಿಯಾದಲ್ಲಿ ಇಳಿದ್ನೋ ಇಲ್ವೋ ಓದೋಕೆ ಓಡ್ತಾ ಇದೀನಿ. ಬ್ಯಾಗೇಜ್ ಸ್ಕ್ಯಾನ್ ಮಾಡೋ ಹೊತ್ತಿನಲ್ಲಿ, ಟ್ರೇಯ್ಯಲ್ಲಿ ಪುಸ್ತಕ ಇಟ್ಟೇ ಇಲ್ಲ ಕೈಯಲ್ಲೇ ಇದೆ. ಆ ಆಫೀಸರ್ ಹೇ... ತಡಕ್ಲಾಂದಿ, ಹೋಗು ಪುಸ್ತಕ ಇಡು ಹೋಗು ಅಂದಾಗ ಸ್ಕ್ಯಾನ್ ಮಾಡಲು ಕೊಟ್ಟೆ. ಅವಸರವಾಗಿ ಬಂದು ಪುಸ್ತಕ ಮತ್ತೇ ತೆರ್ದಾಗ್ಲೇ ನೆಮ್ಮದಿ. ಪಟ್ಟು ಹಿಡಿದು, ಚಳಿಯನ್ನು ಲೆಕ್ಕಿಸದೇ ಓದಿ ಮುಗಿಸಿ, ಇದನ್ನು ಬರೆಯೋಕೆ ಕೂತೆ.
ಕಾದಂಬರಿಯ ಭಾಷೆ ಸುಲಲಿತ, ಆದರೆ ವಿಷಯ ಸಂಕೀರ್ಣ... ಇಷ್ಟೆಲ್ಲಾ ವಿಚಾರಗಳನ್ನು ಒಂದು ಪುಸ್ತಕದಲ್ಲಿ ತರುವುದು ಇದ್ಯಲ್ಲ ಅದಕ್ಕೆ ಒಂದು ಭಂಡ ಧೈರ್ಯ ಮತ್ತು ವಿಷಯದ ಬಗ್ಗೆ ಆಳವಾದ ಜ್ಞಾನ ಬೇಕು. ಎಲ್ಲರೂ ಜಾತಿ, ಧರ್ಮ, ಸಂಸಾರ ಅಂತ ಬರೆದರೆ ಪುಸ್ತಕ ತಲೆ ಮುಟ್ಟಿದರೂ ಮನಸ್ಸಿಗೆ ಮುಟ್ಟುವುದಿಲ್ಲ. ಭೂತ ಮತ್ತು ವರ್ತಮಾನದ ಗಳಿಗೆಗಳು ಮತ್ತು ನಡತೆಗಳೇ ಅಲ್ಲವೇ ನಮ್ಮ ಭವಿಷ್ಯವನ್ನು ಬರೆಯುವುದು. ಖಂಡಿತ ಹೌದು, ಅದುವೇ ಈ ಪುಸ್ತಕದ ಹೂರಣ. 5 ಪಾತ್ರಗಳು 5 ವಿವಿಧ ಮನಸ್ಥಿತಿಗಳು, ಒಬ್ಬರ ಮನಸ್ಥಿತಿ ಒಬ್ಬೊಬ್ಬರಿಗೆ ವಿಚಿತ್ರ. ಆ ವಿಚಿತ್ರ ಸರಪಳಿಯಲ್ಲಿ ಐವರು ಬಂಧಿಯಾಗುತ್ತರೆ. ಹೊರಗೆ ಬರದೇ ಇರುವಷ್ಟು ಘಾಸಿಯನ್ನು ಅನುಭವಿಸುತ್ತಾರೆ. ದೇಬ್ ನ ನಡವಳಿಕೆಗೆ ಕಾರಣ ನಾಯಿಯ ಸಾವೋ, ಸೂಪರ್ಣಳ ವಿಚಾರವೋ, ಅಥವಾ ಅವನು ಓದಿಕೊಂಡ ವಿಷಯಗಳೋ, ಸಂತಾನವಿಲ್ಲದ ನೋವೋ, ತಂದೆಯ ಸಂಬಂಧವೊ ತಿಳಿಯದು. ಆದರೆ ಪ್ರೀತಿಗೆ ಇರುವ ಬೆಲೆ ದುಡ್ಡಿಗೋ, ಸಿಟ್ಟಿಗೊ ಇಲ್ಲವಲ್ಲ. ಪ್ರೀತಿಸುತ್ತ ಬದುಕಬೇಕಷ್ಟೆ. ಅದಕ್ಕೆ ಏನೋ, ಸುದೀಪ್ತೊ ಇದಷ್ಟು ನೆಮ್ಮದಿಯಾಗಿ ದೇಬ್ ಅಥವಾ ಸೂಪರ್ಣ ಇರಲಿಲ್ಲ.
ಪ್ರಸ್ತುತ ಸಾಹಿತ್ಯ ಲೋಕದಲ್ಲಿ ನಾನು ನಂಬಿಕೆ ಇಟ್ಟು ಪುಸ್ತಕ ತೆಗೆದುಕೊಳ್ಳುವವರ ಕೆಲವೇ ಲೇಖಕರಲ್ಲಿ ಅಗ್ರಮಾನ್ಯರು ಕರಣಂ.. ನನ್ನ ನಂಬಿಕೆ ಹುಸಿಯಾಗಲಿಲ್ಲ... ಒಂದೊಳ್ಳೆ ಓದು 😍
ಪುಸ್ತಕ ಕೊಂಡಾಗ at least 200 ಪುಟನಾದ್ರು ಇರಬೇಕಿತ್ತು ಅನ್ನಿಸ್ತು. ಓದಿದ ಮೇಲೆ ಯಾಕೆ ಇಲ್ಲ ಅಂತ ಗೊತ್ತಾಯ್ತು🤓. ಪ್ರತಿ ಪುಟದಲ್ಲು ಸಾಕಷ್ಟು ವಿಷಯಗಳನ್ನ ಲೇಖಕರು ಬಟ್ಟಿಇಳಿಸಿ ಬರೆದಿದ್ದಾರೆ. exam ಹಿಂದಿನ ದಿನ ತಲೆಕೆಡಿಸಿಕೊಂಡು ಓದುವಂತೆ ಓದಿದೆ ಅನಿಸ್ತು. ಇದು ಕನ್ನಡಕ್ಕೆ ಬೇಕಾಗಿದ್ದ ವಿಭಿನ್ನತೆ. ಸಮಯದ ಅಸ್ತಿತ್ವವ ಪ್ರಶ್ನಿಸುತ್ತಾ ಸಮಾಜದ ಹಲವು ಮಜಲುಗಳಲ್ಲಿರುವ ವಿಭಿನ್ನ ಮನೋಧರ್ಮಗಳ ಪರಾಮರ್ಶಿಸಿರುವುದು ಹೊಸ ಆಲೋಚನಾ ಲಹರಿಗಳ ಹುಟ್ಟು ಹಾಕುತ್ತದೆ. ಇದು ಒಮ್ಮೆ ಓದ ಬಹುದು ಅನ್ನುವ ಪುಸ್ತಕದ ಗುಂಪಿಗೆ ಸೇರಿಲ್ಲ, 2-3 ಸಲ ಓದಿದ್ರೆ ಚೆನ್ನಾಗಿ ಅರ್ಥ ಆಗಬಹುದು ಅನ್ನೊ ಗುಂಪಿಗೆ ಸೇರಿದೆ.
ಕರಣಂ ಕಾದಂಬರಿಗಳ ದೊಡ್ಡ ಅಭಿಮಾನಿ ನಾನು. ವಿಷಯವಾಗಲೀ ,ಬರಹದ ಸಾಂದ್ರತೆ ಆಗಲಿ ಈ ತಲೆಮಾರಿನ ಬರಹಗಾರರಲ್ಲಿ ಎತ್ತರದಲ್ಲಿ ನಿಲ್ಲಬಲ್ಲ ತಾಕತ್ತುಳ್ಳವರು ಎಂಬುದು ಆ ಅಭಿಮಾನಕ್ಕೆ ಕಾರಣ. ಆದರೆ ಅವರ ಹೊಸ ಕಾದಂಬರಿ ನನಗೆ ಬಹಳ ನಿರಾಸೆ ತಂದುಕೊಟ್ಟಿತು. ಈ ಅಭಿಪ್ರಾಯ ವೈಯಕ್ತಿಕವೂ,ಪೂರ್ವಗ್ರಹ ಇಲ್ಲದ ಮೊದಲ ಓದೂ ಆದ ಕಾರಣ ಕಾದಂಬರಿ ಓದದವರು ಓದಿ ನಿಮ್ಮ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಒಳ್ಳೆಯದು. ಕಾದಂಬರಿಯಲ್ಲಿ ದೇಬಶೀಷ್ನ ಒಂದು ಕನಸು ಬರುತ್ತದೆ ' ಕೆಮಿಸ್ಟ್ರಿ ಪಠ್ಯಪುಸ್ತಕದಲ್ಲಿ ರಾಸಾಯನಿಕ ಸಂಯೋಜನೆ ತೋರಿಸುವ ಮಾಲಿಕ್ಯೂಲ್ ರಚನೆಯಂತೆ ಕಟ್ಟಲಾದ ಕಾಲನಿ. ಒಂದು ಕೊಳವೆ ಒಂದು ಚೆಂಡಿಗೆ ಸೇರುತ್ತದೆ, ಆ ಚೆಂಡಿನಿಂದ ಇನ್ನೊಂದು ಕೊಳವೆ,ಅಲ್ಲಿಂದ ಇನ್ನೊಂದು ಚೆಂಡು,ಅಲ್ಲಿಂದ ಇನ್ನೊಂದು ಕೊಳವೆ, ಹೀಗೆ ಷಟ್ಕೋನಾಕೃತಿಯ ರಚನೆಯ ಒಂದು ಕೊಳವೆಯಲ್ಲಿ ಸಾವಿರಾರು ಸಣ್ಣ ಮನೆಗಳು, ಕೊಳವೆಯ ಮೇಲೆ ಸಾರಿಗೆ,ಕೊಳವೆಯ ಕೆಳಗೆ ಉದ್ಯಮ,ಕೃಷಿ. ವೃತ್ತಾಕಾರದ ಹಲವು ಚೆಂಡಿನಂತಹ ಕೇಂದ್ರಗಳು ತನಗೆ ಸೇರುವ ಕೊಳವೆಗಳನ್ನು ನಿಯಂತ್ರಿಸುತ್ತದೆ' ಕನಸು ಹೀಗೆ ಇನ್ನೂ ಮುಂದುವರೆಯುತ್ತದೆ. ಈ ಇಡೀ ಕಾದಂಬರಿಯ ಬಂಧ ಹೀಗೇ ಇದೆ.
ಈ ಕಾದಂಬರಿಯ ದೇಬಶೀಷ್ ಹಾಗೂ ಸುಪರ್ಣನ ಸಂಬಂಧ ನನಗೆ ವಿಜಯರಾಘವನ್ ಅವರ 'ಚಿತ್ರಮೂಲ' ಕಾದಂಬರಿಯ ಗಾಢವಾಗಿ ನೆನಪಿಸಿತು. ಸಂಬಂಧಗಳ ನೇಯ್ಗೆ ಮತ್ತು ಮೆಚ್ಯೂರ್ಡ್ ಸಂಬಂಧಗಳ ಚಿತ್ರಣ ಅದರಲ್ಲಿ ಗಾಢವಾಗಿ ಬಂದಿದೆ. ಮೂರು ನಾಲ್ಕು ಮುಖ್ಯ ಪಾತ್ರಗಳ ಕಟ್ಟಿಕೊಂಡು ಸಂಬಂಧ ,ಕಾಲ, ಮೇಲ್ವರ್ಗ,ಕೆಳವರ್ಗ ಸಮಾಜ ಎಲ್ಲವನ್ನೂ ಮಥಿಸುವ ಈ ಶೈಲಿ ಕಾದಂಬರಿಗಿಂತ ನಾಟಕಕ್ಕೆ ಹೆಚ್ಚು ಹೊಂದುತ್ತದೆ ಎಂದು ಅನಿಸಿತು. ಮೊದಲನೆಯದಾಗಿ ಧಾರಾವಾಹಿಗಳಲ್ಲಿ ಕರಣ್ ಜೋಹರ್ ಸಿನಿಮಾಗಳಲ್ಲಿ ಬರುವ ಹಾಗಿನ ಮಾತುಗಳು ಅಂದರೆ ಸಹಜವಾಗಿಲ್ಲದ ತೀರಾ ಕೃತಕ ಬೌದ್ಧಿಕ ಅಭ್ಯಾಸ. ಎರಡನೆಯದು ನನಗೆ ತಾಕಿತು ನೋವಾಯಿತು ಎಂಬ ಸಾಮಾನ್ಯ ಭಾವನೆಗೂ ಅಷ್ಟು ತಾತ್ವಿಕ ಮಾತುಗಳು ತುಂಬಾ ಭಾರ ಅನಿಸಿತು.(ಪುಟ 54)
ಮೂರನೆಯದು ಪ್ರಾಮಾಣಿಕವಾಗಿ ಅನಿಸಿದ್ದು ಲೇಖಕರಿಗೆ ತನ್ನ ಪಾಂಡಿತ್ಯ ಪ್ರದರ್ಶನಕ್ಕೆ ದಾರಿ ತೋರುವ ಪ್ರಸಂಗಗಳ ತುರುಕಲಾಗಿದೆ ಎಂದು
ಹದಿನೆಂಟು ,ಇಪ್ಪತ್ತು ,ಮೂವತ್ತೆರಡನೇ ಪುಟಗಳ ವಿವರಣೆಗಳು ತನ್ನ ಅಹಂ ತೃಪ್ತಿಗಾಗಿ ಅರಿವಿನ ತೃಪ್ತಿಗಾಗಿ ಸೇರಿಸಿದ ಭಾಗಗಳಾಗಿ ಕಂಡಿತು (ಜಗದ್ವಿಖ್ಯಾತ ಗಾಡ್ಫಾದರ್ ಸಿನಿಮಾದಲ್ಲಿ ನಡುವೆ ಒಂದು ಅಡುಗೆಯ ರೆಸಿಪಿ ಹೇಳುವ ಸೀನ್ ಬರುತ್ತದೆ. ಅಲ್ಲಿ ಅದು ಹೇಗೆ ಬ್ಲೆಂಡ್ ಆಗಿದೆ ಎಂದೂ ಈ ಕಾದಂಬರಿಯಲ್ಲಿ ಹಾಗೆ ರೆಸಿಪಿ ಸಹಿತದ ವಿವರಣೆ ಎಷ್ಟು ಕೃತಕವಾಗಿದೆ ಗಮನಿಸಿ)
ಇನ್ನು ಕಾಲವೆಂಬುದೇ ಇಲ್ಲ ಎಂಬ ಮುಖ್ಯ ಥಿಯರಿಯಾಗುಳ್ಳ ಈ ವಿವರಣೆ ಮತ್ತು ಕಾದಂಬರಿಯ ಕಥಾಭಾಗ (ಕ್ರಿಯೆ ನಡೆದ ಬಳಿಕ ಅದರ ಪರಿಣಾಮಗಳ ಬದಲಾಯಿಸಲಾಗದೆ ಸಿಲುಕಿಕೊಳ್ಳುವ ಅನುಭವಿಸಲೇಬೇಕಾದ ಅವಸ್ಥೆ) ಎರಡೂ ಆಸಕ್ತಿದಾಯಕವಾದರೂ ಅವುಗಳ ಹೆಣಿಗೆ ಗೊಂದಲಕ್ಕೀಡುಮಾಡಿತು.
ಎಲ್ಲದಕ್ಕಿಂತ ಮುಖ್ಯ ಕೊರತೆ ಕಾದಂಬರಿ ಎಲ್ಲೂ ನಮಗೆ ಓದುಗರಿಗೆ ಕನೆಕ್ಟ್ ಆಗುವುದೇ ಇಲ್ಲ. ಬುದ್ಧಿ ಭಾವ ಎರಡೂ ಸೇರಿ ರಸೋತ್ಪತ್ತಿ ಆಗಬೇಕಾದ ಕಡೆ ಬರಿಯ ಬುದ್ಧಿಯ ಅಂದರೆ ಪಾಂಡಿತ್ಯ ಪ್ರದರ್ಶನವಷ್ಟೇ ಸಿಗುತ್ತದೆ.
ಇವೆಲ್ಲ ಮೊದಲ ಓದಿಗೆ ಅನಿಸಿದ ಅಂಶಗಳು. ನನ್ನ ಗ್ರಹಿಕೆ ತಪ್ಪಿರಲೂಬಹುದು. ಆದರೆ ನಾನು ಬರೆದದ್ದೇನು ಎಂದು ವಿವರಿಸಬೇಕಾದ ಪರಿಸ್ಥಿತಿ ಒಬ್ಬ ಸರ್ಜನಶೀಲ ಲೇಖಕನಿಗೆ ಬಂದಿದೆ ಎಂದಾದರೆ ಅಲ್ಲಿ ಅವನು ಮತ್ತು ಓದುಗನಿಗೆ ತಂತು ಎಲ್ಲೋ ತಪ್ಪುತ್ತಿದೆ ಎಂದೇ ಅರ್ಥ. ಅದಲ್ಲದೆ ಈ ಕಾದಂಬರಿ ನನಗೆ ಕೃತಿಕಾರ ,ಕೃತಿಗಿಂತ ಮೇಲೆ ನಿಲ್ಲಲು ನಡೆಸಿದ ಪ್ರಯತ್ನದ ಹಾಗೆ ಕಂಡಿತು. ಕರಣಂ ಅವರ ಮೊದಲ ಕಾದಂಬರಿಯಿಂದ ಓದಿಕೊಂಡು ಬಂದ ಕಾರಣ ಅವರ ಸತ್ವವು ಹೀಗೆ ಪಾಂಡಿತ್ಯ ಪ್ರದರ್ಶನದ ನಡುವೆ ಕಳೆದುಹೋಗುವುದು ನೋಡಿ ಖೇದವೆನಿಸಿತು.
ನಿಮ್ಮ ಅಭಿಪ್ರಾಯ ನಿಮ್ಮದು. ಅವರಿಂದ ಇನ್ನಷ್ಟು ಒಳ್ಳೆಯ ಕೃತಿಗಳು ಬರಲಿ ಎಂದು ಆಶಿಸುವೆ.
ಗೆಳೆಯನ ಹುಟ್ಟುಹಬ್ಬಕ್ಕೆ "ಸತ್ತು" ಪುಸ್ತಕವನ್ನು ಆರ್ಡರ್ ಮಾಡಿದೆ, ಅದೃಷ್ಟವೋ ಏನೋ ಎಂಬಂತೆ ನನ್ನ ವಿಳಾಸ ಅಟೋ ಸೇವ್ ಆಗಿ, ಕೊನೆಗೆ ನನ್ನ ಬಳಿಗೆ ಬಂದು ತಲುಪಿತು. ನಾನು ಕರಣಂ ಪವನ್ ಪ್ರಸಾದ್ ಅವರನ್ನು ಕರ್ಮ ಪುಸ್ತಕದಿಂದ ಓದಬೇಕೆಂಬ ಹಂಬಲದಲ್ಲಿದ್ದೆ, ಆದರೆ ಸತ್ತು ಪುಸ್ತಕ ರಿವ್ಯೂ ಎಲ್ಲೆಡೆ ನೋಡಿ, ತವಕದಿಂದ ಓದಲು ಶುರುಮಾಡಿದೆ. ಪ್ರಾರಂಭದಲ್ಲಿ ಒಂದು ನಾರ್ಮಲ್ ಕತೆ ಎಂದು ಅನ್ನಿಸುವ ವೇಳೆಗೆ ವಿಜ್ಞಾನದ ವಿಷಯಗಳು ಒಮ್ಮೆಲೆ ನನ್ನನ್ನು ಮೌನಕ್ಕೆ ಜಾರಿಸಿ; ಅಬ್ಬಾ! ಈ ರೀತಿ ಕೂಡ ವಿಭಿನ್ನವಾಗಿ, ವೈಶಿಷ್ಟ್ಯವಾಗಿಯೂ ಬರೆಯಬಹುದಾ ಎಂದನ್ನಿಸಿತು. ದೇಬ್ ಹಾಗೂ ಸುಪರ್ಣ ವಾವ್! ಅದ್ಭುತ ಸಂಭಾಷಣೆಗಳು.
ನನ್ನ ಮಟ್ಟಿಗೆ ಅಷ್ಟೇನೂ ಸುಲಭವಲ್ಲದ ಓದು. ಸಮಯದ ಅಸ್ತಿತ್ವದ ಬಗೆಗಿನ ವಿವರಣೆ ಸರಾಗವಾಗಿ ಅರ್ಥವಾಗಲಿಲ್ಲ, (ನನ್ನ ಮಿತಿಯೇ, not blaming the author) ಒಟ್ಟಾರೆ ಕಥೆ ನಾನೆಂಬ ಅಹಂ- ನಾವೆನ್ನೋ ಒಳಗೊಳ್ಳುವಿಕೆಗಳ ಅಸ್ತಿತ್ವದ ಸಂಘರ್ಷ ಅಂತ ಅನ್ನಿಸ್ತು. A Thought provoking novella. ಮೊದಲ ಓದಿಗೆ ಇಷ್ಟು.. ಮತ್ತೆ ನೋಡುವ.
ಸತ್ತು - ಕನ್ನಡದ ಮಟ್ಟಿಗೆ ವಸ್ತು, ಪಾತ್ರಗಳು, ಹಾಗೂ ನಿರೂಪಣೆಯಲ್ಲಿ revolutionary ಪ್ರಯತ್ನ ಅನ್ನಿಸಿತು. ಓದುಗಳಾಗಿ ನನ್ನ ಸಂವೇದನೆಯ ಮತ್ತು ಆಲೋಚನೆಯ ವ್ಯಾಪ್ತಿಯನ್ನು ಹಿಗ್ಗಿಸಿದ ಪುಸ್ತಕ ಇದು.
ಕೆಲವೇ ದಿನಗಳಲ್ಲಿ ನಡೆಯುವ ಕೆಲವೇ ಪಾತ್ರಗಳ ಕಥೆ. ಆದರೆ ಇಲ್ಲಿರುವ ಜಾತಿ, ಕ್ಲಾಸ್, ಕಲೆ, ಪ್ರಜ್ಞೆ, ನೈತಿಕತೆ, ವಿಜ್ಞಾನ ಇವುಗಳ ಕಾಂಪ್ಲೆಕ್ಸ್ ಹೆಣಿಗೆ ಮತ್ತು ಸಾಮಾಜಿಕ ವಿಶ್ಲೇಷಣೆಯ ಸಾಂದ್ರತೆ ಬಹುಕಾಲ ಯೋಚನೆಗೆ ಹಚ್ಚುವಂತದ್ದು. ಇದರ ಜೊತೆಗೆ ಸಮಯದ ಧೋರಣೆ ಮತ್ತು ಭ್ರಾಮಕತೆಯ ಹಿನ್ನೆಲೆ ಪಾತ್ರಗಳ ಅಸ್ತಿತ್ವಕ್ಕೆ ಹೊಸದೊಂದು ಆಯಾಮ ಕೊಟ್ಟಿದೆ.
ನಮ್ಮ ಅಸ್ತಿತ್ವ ಎಂಬ ಭ್ರಮೆಯ ಸುತ್ತ ನಾವು ಕಟ್ಟಿಕೊಳ್ಳುವ ಧೋರಣೆ, ಈ ಭ್ರಮೆಯನ್ನು ಜೀವಂತವಾಗಿಡಲು ಪಡುವ ಹೆಣಗಾಟ, ಮಾನಸಿಕ ಹಿಂಸೆ. ವೈಯುಕ್ತಿಕ ಧೋರಣೆ, ಭ್ರಮೆಗಳನ್ನು ರಕ್ಷಿಸಿಕೊಳ್ಳುವ ಭರದಲ್ಲಿ ಆಗುವ ಸಾಮಾಜಿಕ ಪರಿಣಾಮ. ಆರ್ಥಿಕ ಮತ್ತು ಸಾಮಾಜಿಕ ಸ್ಥರಗಳ ನಡುವೆ, generationally perpetuate ಆಗುವ hierarchy ಮತ್ತು power imbalance, ಇವೆಲ್ಲ ಸತ್ತುವಿನಲ್ಲಿ ನಮಗೆ ಎದುರಾಗುತ್ತವೆ.
ದೇಬ್ ನ ಅಸ್ತಿತ್ವದ ಭಾಗವೇ ಆಗಿರುವ ಕಾರು, ಡಾಬ್ರಿ, ಸುಪರ್ಣಾಳ ಜೊತೆಗಿನ relationship - ಅವರುಗಳ ಬಗ್ಗೆ ಅವನ ಅಭದ್ರತೆ, ಅವುಗಳ ಜೊತೆ ಅವನ ಅಹಮ್ಮಿನ ಗುರುತಿಸಿಕೊಳ್ಳುವಿಕೆ, ಅವುಗಳ ಬಗ್ಗೆ ನಿರಂತರ ಸಾಗುವ ಸ್ವಗತ,ಅವುಗಳಿಗೆ ಧಕ್ಕೆ ಬಂದಾಗ (real or imaginary) ಅನಾವರಣ ವಾಗುವ ಅವನ ಘಾತುಕತೆ, ಅಸ್ತಿತ್ವದ ಭ್ರಮೆ ಕಳಚಿದಾಗ ದೇಬ್ನನ್ನು ಆವರಿಸುವ ಅನಾಥಪ್ರಜ್ಞೆ ಮತ್ತು acute desolation - ಇವೆಲ್ಲವೂ ಬುದ್ಧಿಯ ಆಚೆಗೆ, ನಮ್ಮ ಭಾವಕ್ಕೆ ತಾಕುತ್ತವೆ.
ದೇಬ್ ಮತ್ತು ಸುಪರ್ಣಾಳ ಧೋರಣೆಗಳ ತಿಕ್ಕಾಟ ಎಷ್ಟೋ ಕಡೆ ಇಡೀ ಸಮಾಜದ ಸಂಘರ್ಷದ ಪ್ರತಿಫಲನ ಎನಿಸಿದರೆ, ಕೆಲವೊಂದು ಕಡೆ ನಮ್ಮಲ್ಲೇ ಅಂತರ್ಗತವಾಗಿ ಇರುವ ದ್ವಂದ್ವದ (ಆದರ್ಶ vs ಆಚರಣೆ ) ಬಗ್ಗೂ ಯೋಚನೆ ಮಾಡುವಂತೆ ಮಾಡುತ್ತವೆ.
ಕೊನೆ ಕೊನೆಗೆ, 'ಈಗ' ಎಂಬುದು ಇಲ್ಲ, ಸಮಯ ಎಂಬುದು ಇಲ್ಲ ಎನ್ನುತ್ತಲೇ ಸುದೀಪ್ತೋ, ದೇಬ್ ನಿಂದಾಗುವ linear cause and effect ಗೆ ಸಾಕ್ಷಿ ಆದನಾ ಅಥವಾ cause and causation ಎಂಬುದು ಚಲನೆಯ ಎರಡು ಬಿಂದು ಅಷ್ಟೇ ಅದಕ್ಕೂ ಸಮಯಕ್ಕೂ ಸಂಬಂಧ ಇಲ್ಲ ಎಂದು ಲೇಖಕರು ಹೊಸ ದೃಷ್ಟಾಂತ ಇಲ್ಲಿ ನೀಡಿದ್ದಾರಾ ಎಂಬ ಜಿಜ್ಞಾಸೆ ಕೂಡ ನನಗೆ ಬಂತು.
ಕರಣಂ ಅವರ ಮುಂಚಿನ ಕಾದಂಬರಿಗಳಿಗಿಂತ ಸತ್ತು descriptive ಮತ್ತು visual ಆಗಿ ನನಗೆ ಕಂಡಿತು. ಪ್ರತಿಯೊಂದು ಸ್ಥಳ, ಘಟನೆ ಮತ್ತು ಆಲೋಚನೆಯ ಲಹರಿಯೂ ವಿಸ್ತೃತವಾಗಿ immersive ಆಗಿದೆ. ಇಲ್ಲಿನ ಸಾಮಾಜಿಕ ವ್ಯಾಖ್ಯಾನ observation ನಲ್ಲಿ ಸೂಕ್ಷ್ಮವಾದರೂ, ನಿರೂಪಣೆಯಲ್ಲಿ ಸ್ವಲ್ಪ ಜಾಸ್ತಿಯೇ ನೇರವಾಗಿದ್ದಂತೆ ಅನಿಸಿತು.
ಸತ್ತುವಿನ ವಿಷಯ ಘನ ಗಂಭೀರವಾದರೂ, ನಿರೂಪಣೆಯಲ್ಲಿನ dry wit ನಿಂದಾಗಿ ಭಾರ ಅನಿಸುವದಿಲ್ಲ.
ಸತ್ತು ಎಂದರೆ ಇರುವಿಕೆ ಎಂದರ್ಥ.ಈ ನೀಳ್ಗತೆಯ ಉದ್ದಕ್ಕೂ ಪಾತ್ರಗಳ ಇರುವಿಕೆಯ ಸಂಘರ್ಷ ಓದುಗನಿಗೆ ಕಾಣ ಸಿಗುತ್ತದೆ. ಫಿಲ್ತಿ ರಿಚ್ನೆಸ್ ನಿಂದ ಬೆಳೆಸಿಕೊಂಡ ಅಹಂ ಹಾಗೂ ಎಲ್ಲರೂ ಸಮಾನರು ಎಂಬ ತಾತ್ವಿಕತೆಯೊಂದಿಗೆ ಬೆರೆತ ಕರುಣೆ - ಇವೆರಡರ ಸತ್ತುವಿನ ಹೋರಾಟವನ್ನು 102 ಪುಟಗಳ ನೀಳ್ಗತೆಯಲ್ಲಿ ಸೊಗಸಾಗಿ ಲೇಖಕರು ಚಿತ್ರಿಸಿದ್ದಾರೆ. ಇದರ ಜೊತೆಗೆ ಸಮಯದ ಇರುವಿಕೆಯ ಬಗ್ಗೆಯೂ ಸೊಗಸಾದ ಸಂಭಾಷಣೆಗಳಿವೆ. ನಂಗೆ ತುಂಬಾ ಕುಶಿ ನೀಡಿದ್ದು, ದೇಬ್ ಕಾಣುವ ಕನಸುಗಳು.ಪುರಾಣದ ಕಾಲದಿಂದ ಸಾಗಿ ರೋಮನ್ ಯುಗವನ್ನು ಅವಲೋಕಿಸಿ ಕಡೆಗೆ ಮೆಟ್ರೋದ ಬೋಗಿಗಳಲ್ಲಿ ಕೊನೆಗೊಳ್ಳುವ ಕನಸುಗಳು ಒಂತರಾ ಟೈಂ ಟ್ರಾವೆಲ್ ನಂತೆ ಅನಿಸಿತು.ಮಾನವ ಸಂಬಂಧ ಹಾಗೂ ಸಮಾಜದ ವಿವಿಧ ಸ್ತರಗಳನ್ನು ಲೇಖಕರು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಒಟ್ಟಾರೆ ಹೇಳುವುದಾದರೆ, ಸತ್ತು ಒಂದೊಳ್ಳೆ ಓದು. ಪ್ರತಿ ಕಾದಂಬರಿಯಲ್ಲೂ ಬಗೆ ಬಗೆಯ ಓದಿನ ರುಚಿ ನೀಡಿ ಓದುಗರಿಗೆ ಉಣ ಬಡಿಸುತ್ತಿರುವ ಲೇಖರಿಗೆ ಧನ್ಯವಾದಗಳು.
Though the book starts with high hopes to explore the corners of science and meta physics, it becomes dry and colorless after a few pages. Compared to other books of Karanam, It doesn't meet the expectations. One time read.
ಕರಣಂ ಪವನ್ ಪ್ರಸಾದ್ ಕನ್ನಡದ ಸದ್ಯದ ಬಹಗಾರರಲ್ಲಿ ಕಾದು ಕುಳಿತು ಕೃತಿಯನ್ನು ಓದುವಂತೆ ಮಾಡುವ ಲೇಖಕರಲ್ಲಿ ಒಬ್ಬರು. ಮತ್ತೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಬೇಕಾದಾಗ ಎಷ್ಟು ಬೇಕೋ ಅಷ್ಟು ಮಾತಾಡಿ ಸುಮ್ಮನಾಗುವವರು. ಅವರ ಕಳೆದ ನಾಲ್ಕು ಕೃತಿಗಳು ಮಾರುಕಟ್ಟೆಯಲ್ಲೂ ಓದುಗರಲ್ಲೂ ಒಳ್ಳೆಯ ಪ್ರಭಾವ ಬೀರಿದೆ. ಇದು ಅವರ ಐದನೇ ಕಾದಂಬರಿ . ಕಾದಂಬರಿಯ ಹೆಸರು ಸತ್ತು. ಸತ್ತು ಎಂದರೆ ಇರುವಿಕೆ ಎಂದರ್ಥ
ರಾಯಕೊಂಡ ಓದಿದವರಿಗೆ ಎಂಜಾಯ್ ಮಾಡಿದವರಿಗೆ ಇದು ಅಷ್ಟಾಗಿ ಎಟುಕುತ್ತ ಗೊತ್ತಿಲ್ಲ. ಇದರಲ್ಲಿ ವಿಜ್ಞಾನ ಇದೆ, ತತ್ವಶಾಸ್ತ್ರ ಇದೆ ಜೊತೆಗೆ ಅವೆರಡರ ಜೊತೆ ಸಮಾಂತರವಾಗಿ ಹಾದುಹೋಗೋ ಆಧುನಿಕ ವಿವಾಹಿತ ಜೋಡಿಗಳ ಸಂಕೀರ್ಣವಾದ ಬದುಕಿದೆ ಜೊತೆಗೆ ಅವರ ಹೆಗಲಿನಲ್ಲಿ ಹೊತ್ತುಕೊಂಡಿರೋ ಧೋರಣೆಗಳು ಸಹ ಇವೆ. ಎಲ್ಲವೂ ಒಟ್ಟಾರೆ ಚೆನ್ನಾಗಿ ಬ್ಲೆಂಡ್ ಆಗಿ ಕೊನೆಗೆ ಕುತೂಹಲ ಘಟ್ಟದಲ್ಲಿ ಕೊನೆಯಾಗುತ್ತದೆ. ಸಮಯ ಇದೆ ಎಂದ್ರೆ ಇದೆ ಇಲ್ಲ ಅಂದ್ರೆ ಇಲ್ಲ.
ಒಬ್ಬ ಲೇಖಕರು ಈ ಪುಸ್ತಕ ಓದಿ ತಮ್ಮ ಬೇಜಾರನ್ನು ಹೊರಹಾಕಿದ್ದು ಅದು ವೈಯುಕ್ತಿಕ ಪೂರ್ವಗ್ರಹದಲ್ಲ ಅಂತ ಬೇರೆ ಬರೆದುಕೊಂಡಿದ್ದಾರೆ. ಕರಣಂ ಪುಸ್ತಕ ಬಿಡುಗಡೆ ಸಮಯದಲ್ಲಿ ತಾನು ಬರೆಯುವುದು ತನ್ನನ್ನು ಸೃಜನಶೀಲವಾಗಿರಿಸಿಕೊಳ್ಳುವುದಕ್ಕೆ ಅದು ಬಿಟ್ಟು ಬೇರೆ ಯಾವ ಘನವಾದ ಮೆಸೇಜು ಕೊಡುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ಅವರ ಹೇಳಿಕೆ ಮೇಲೆ ಓದಿಕೊಂಡರೆ ಪುಸ್ತಕ ನಿಜಕ್ಕೂ ಇಷ್ಟವಾಗುತ್ತದೆ. ಬದುಕಿನ ಅದರಲ್ಲೂ ಸಂಬಂಧದ ಸಂಕೀರ್ಣತೆ ಕಂಡವರಿಗೆ ಮತ್ತಷ್ಟು ಆಯಾಮಗಳು ಗೋಚರಿಸಬಹುದು.ಪ್ರಸ್ತುತ ಜಗತ್ತಿಗೆ ಪ್ರಸ್ತುತ ಬದುಕಿಗೆ ಹೇಳಿಮಾಡಿಸಿದ ಪುಸ್ತಕ. ಪುಸ್ತಕದ ಗಾತ್ರ ಚಿಕ್ಕದ್ದು .ನಿತ್ಯ ಓದುವವರಾಗಿದ್ದರೆ ಎರಡರಿಂದ ಮೂರು ಗಂಟೆಯಲ್ಲಿ ಒಂದೇ ಗುಕ್ಕಿನಲ್ಲಿ ಓದಬಹುದು, ಒಂದೇ ಗುಕ್ಕಿನಲ್ಲಿ ಓದಿದಷ್ಟು ಒಳ್ಳೆಯದು.
ತುಂಬಾ high hopes ಇಟ್ಕೊಂಡ್ ಓದಲು ಶುರು ಮಾಡಿದ ಪುಸ್ತಕ. ಪುಸ್ತಕ ನಂಗೆ ಅರ್ಥವೇ ಆಗ್ಲಿಲ್ಲವೋ ಏನೋ ಗೊತ್ತಿಲ್ಲಾ. ಆದ್ರೆ ನಂಗೆ ಅಷ್ಟು ರುಚಿಸಲಿಲ್ಲ. ಮಧ್ಯದಲ್ಲಿ ಬರುವ ಕೆಲವೊಂದು ಸನ್ನಿವೇಶಗಳು ಮತ್ತು ಪಾತ್ರಗಳ ಮನೋ ತುಮುಲ ಬಿಟ್ಟು ಮತ್ತೇನು ಇಷ್ಟ ಆಗ್ಲಿಲ್ಲ ನಂಗೆ. 🙈
ಕರಣಂ ಪವನ್ ಪ್ರಸಾದ್ ರವರ ಬರವಣಿಗೆ ಎಷ್ಟು ವಿಭಿನ್ನವೋ ಅವರ ಪುಸ್ತಕಗಳ ಶೀರ್ಷಿಕೆಯು ಅಷ್ಟೇ ವಿಭಿನ್ನ. 'ನನ್ನಿ' ಯಂತೆ 'ಸತ್ತು' ಕಾದಂಬರಿಯು ಅದರ ಶೀರ್ಷಿಕೆಯಿಂದ ನನ್ನಲ್ಲಿ ಕುತೂಹಲ ಮೂಡಿಸಿದರೂ, ಓದಲು ಪ್ರೇರೇಪಿಸಿದ್ದು ಅದರ ಕಥಾವಸ್ತು. ಭೌತಶಾಸ್ತ್ರ ನನಗೆ ಕಬ್ಬಿಣದ ಕಡಲೆಯೂ ಹೌದು ರೋಚಕ ವಸ್ತುವೂ ಹೌದು. ಅದರಲ್ಲೂ space-time relationship ನಂತಹ ಪರಿಕಲ್ಪನೆ ಅತ್ಯಂತ ಅಚ್ಚರಿಯನ್ನು ಮೂಡಿಸುವಂತಹದ್ದು. ಸತ್ತು ಇಂತಹ Time Dilation ಎಂಬ ಗಾಢವಾದ ವಿಷಯವನ್ನು ಕಥಾವಸ್ತುವನ್ನಾಗಿಟ್ಟುಕೊಂಡು ಮನುಷ್ಯನ ಸ್ವಭಾವ ಹಾಗೂ ಸಮಾಜದೊಂದಿಗೆ ಅವನ ಹೊಂದಾಣಿಕೆ ಮತ್ತು ತಿಕ್ಕಾಟಗಳನ್ನು ತೋರಿಸಲು ಪ್ರಯತ್ನಿಸುತ್ತದೆ.
ನಾಲ್ಕೈದು ಪಾತ್ರಗಳ ಸುತ್ತ ಕೆಲವೇ ದಿನಗಳಲ್ಲಿ ನಡೆಯುವ ಒಂದು ಘಟನೆಯನ್ನು ಕರಣಂ ಅವರು ಅತ್ಯಂತ ಸುಲಲಿತವಾಗಿ ಹೆಣೆದಿದ್ದಾರೆ. ಸುಲಭವಾಗಿ ಒಂದೇ ಬಾರಿಗೆ ಓದಿಸಿಕೊಂಡು ಹೋಗುವ ಕಥೆಯೆನ್ನಿಸಿದರೂ, ಓದುತ್ತಾ ಹೋದಂತೆ ಕಾದಂಬರಿಯ ಆಳ ಮತ್ತಷ್ಟು ವಿಸ್ತೃತವಾಗುತ್ತದೆ. ಕಾಲ ಅಥವಾ 'ಈಗ' ಎಂಬುದು ಇಲ್ಲ ಎಂಬ time dilation ಕಾನ್ಸೆಪ್ಟ್ ಅನ್ನು ಲೇಖಕರು ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಬೇರೆ ಬೇರೆ reference ಮತ್ತು ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ. ಕಾಲ, ಮನುಷ್ಯನು ತನ್ನ ಅಸ್ತಿತ್ವವನ್ನು ಮತ್ತೆ ಮತ್ತೆ ಸಾಬೀತು ಮಾಡಲು ಬಳಸಿಕೊಳ್ಳುವ ಒಂದು ಮಾಪಕ ಎಂಬ ವಾದವು ಕಾದಂಬರಿಯಲ್ಲಿ ಮೂಡಿ ಬಂದಿದೆ. ಮನುಷ್ಯನ ಗುಣ ಸ್ವಭಾವಗಳನ್ನು 'ನನ್ನಿ'ಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟರುವಂತೆ, ಈ ಕಾದಂಬರಿಯಲ್ಲೂ ಮನುಷ್ಯ ಹಾಗೂ ಅವನ ಸಾಮಾಜಿಕ ವರ್ತನೆಯನ್ನು class struggles ಮತ್ತು time dilationನ ಆಧಾರಿಸಿ ಚಿತ್ರಿಸಲು ಪ್ರಯತ್ನಿಸಿದ್ದಾರೆ. ಮನುಷ್ಯರು ಕಾದಂಬರಿಯಲ್ಲಿ ಬರುವ ದೇಬಾಶೀಷ್ ಮತ್ತು ಸುಪರ್ಣಾ ಪಾತ್ರಗಳಂತೆ ಅವರವರ ಧೋರಣೆಗಳನ್ನು ಮಂಡಿಸುವ ಮೂಲಕ 'ತಮ್ಮ ಅಸ್ತಿತ್ವದ ಗುರುತನ್ನು ಮತ್ತೆ ಮತ್ತೆ ಸಾಬೀತು ಮಾಡುವ ಹೆಣಗಾಟವಾ?' ಎಂಬ ಪ್ರಶ್ನೆಯು ಕಾಡುತ್ತದೆ. ದೇಬಾಶೀಷನ ಸ್ವಗತಗಳು ಮನುಷ್ಯನು ಪದೇ ಪದೇ ತನ್ನ ಅಹಂ ಅನ್ನು ಸಮಾಧಾನ ಪಡಿಸುವ ಹತಾಶೆಯನ್ನು ತೋರುತ್ತದೆ. ನನ್ನಿ ಕಾದಂಬರಿಯಂತೆ ಪ್ರಾಣಿಗಳ ಸ್ವಭಾವ, ಮನಃಸ್ಥಿತಿಗಳನ್ನು ಸುಂದರವಾಗಿ ಬಿಚ್ಚಿಡಲಾಗಿದೆ.
ಕಾದಂಬರಿಯ ಪೂರ್ವಾರ್ಧ ಉತ್ತಮವಾಗಿ take-off ಆದರೂ ಉತ್ತರಾರ್ಧ ಸಮೀಪಿಸುತ್ತಿದ್ದಂತೆ ಮುಖ್ಯ ಕಥಾವಸ್ತುವಿನಿಂದ ಸ್ವಲ್ಪ deviate ಆಗುತ್ತದೆ. ಅತಿಯಾದ class struggle ವಿವರಣೆ, ಸ್ತ್ರೀವಾದ, ಪುರಾಣ, ಧರ್ಮಶಾಸ್ತ್ರಗಳು ಹೀಗೆ ಹತ್ತು ಹಲವು ವಿಷಯಗಳು ಕಾದಂಬರಿಯಲ್ಲಿ ಚರ್ಚೆ, 'too many cooks spoil the broth' ಎನ್ನುವಂತೆ ಕಥೆಗೆ ಅಷ್ಟು ಸಮಂಜಸವಾಗಿ ಹೊಂದಾಣಿಕೆಯಾಗಿಲ್ಲ. ಈ ಕಾರಣಗಳಿಂದ ಸತ್ತು ವಿಭಿನ್ನ ಕಾದಂಬರಿಯಾದರೂ ವೈಯಕ್ತಿಕವಾಗಿ ನನಗೆ ಅಷ್ಟು ರುಚಿಸಲಿಲ್ಲ. ಬಹುಶಃ ಮತ್ತೆ 2-3 ಬಾರಿ ಓದಿದಾಗ ಕಾದಂಬರಿಯನ್ನು ಮತ್ತಷ್ಟು ಅರ್ಥವಾಗಬಹುದು.
ಕೆಲವೊಂದು ಸಂಭಾಷಣೆಗಳು ದೇಬಶಿಷ್ ಮತ್ತು ಸುಪರ್ಣಳ ನಡುವೆ ನಡೆಯುವುದು ನನ್ನ ಬೌದ್ಧಿಕ ಮಟ್ಟಕ್ಕೆ ಮೀರಿತ್ತು. ಬುದ್ದಿಜೀವಿಗಳ ನಡುವಿನ ಜಗಳದಲ್ಲೂ ಬಹಳಷ್ಟು ವಿಚಾರಗಳು ಅಡಗಿರುತ್ತೆ :) . ದೇಬಶಿಷ್ ಕನಸಿನಲ್ಲಿ ಪುರೂರವ ಯಾಕೆ ಬಂದ ಎಂಬುದು ಗೊತ್ತಾಗಲಿಲ್ಲ ....ಓದಿನ ಮದ್ಯೆ ನಾನು ಕೊಟ್ಟ ಬಿಡಿವಿನಿಂದ ಕೆಲವೊಂದು ವಿಚಾರಗಳು ಅಷ್ಟಾಗಿ ಮನದಟ್ಟಾಗಲಿಲ್ಲ ... ಮಗದೊಮ್ಮೆ ಒಮ್ಮೆಗೆ ಓದಿ ಮುಗಿಸುವ ಆಸೆ...ಸುದೀಪ್ತೋರು ಹೇಳಿದ ಟೈಮ್ ಡೈಲೇಷನ್ ನಾನು ಕೇಳೇ ಇರಲಿಲ್ಲ ..ಕನ್ನಡಕ್ಕೆ ಕರಣಂ ಪವನ್ ಅಂತಹ ಬರಹಗಾರರು ಸಿಕ್ಕಿದ್ದು ನಮ್ಮ ಅದೃಷ್ಟ..
ಪವನ್ ನನ್ನ ಇತ್ತೀಚಿನ ನೆಚ್ಚಿನ ಬರಹಗಾರರಲ್ಲಿ ಒಬ್ಬರು. ಅವರ "ಸತ್ತು" ಕಾದಂಬರಿಯು ಮೇಲ್ವರ್ಗ-ಕೆಳವರ್ಗ, ಬಡವರು-ಶ್ರೀಮಂತರು ಮತ್ತು ಹುಟ್ಟಿನಿಂದ ಬರುವ ಸಾಮಾಜಿಕ-ಆರ್ಥಿಕ ಸವಲತ್ತುಗಳ ಕಥೆಯಾಗಿದೆ. ಕೆಲವು ಹುಟ್ಟಿನಿಂದಲೇ ಬಂದ ಸವಲತ್ತುಗಳ ತಪ್ಪುಗಳನ್ನು ಬದಿಗಿಟ್ಟು, ನಾವು ನಮ್ಮ ಸವಲತ್ತುಗಳನ್ನು ಹೇಗೆ ಮತ್ತು ಏಕೆ ಬಳಸುತ್ತೇವೆ ಎಂಬುದರ ಬಗ್ಗೆ ನಮಗೆ ತಿಳಿದಿರಬೇಕು.
ತನಗಿರುವ ಸವಲತ್ತುಗಳು ತನಗಾಗಿ ಮಾತ್ರ ಮತ್ತು ಬೇರೆ ಯಾರೂ ಅವುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನಂಬುವ ದೇಬಾಶಿಸ್, ಇದನ್ನು ಮತ್ತೆ ಮತ್ತೆ ಪುನರಾವರ್ತಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟು, ತನ್ನ ಶಾಂತಿಯನ್ನು ಹಾಳುಮಾಡುತ್ತಾನೆ.
ಇದನ್ನು ಓದಿದಾಗ, ಆರ್ಥಿಕವಾಗಿ ಉತ್ತಮವಾಗಿಲ್ಲದವರು ಕ್ಷುಲ್ಲಕ ವಿಷಯಗಳಿಗೆ ತಮ್ಮ ಶಾಂತಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ಅನಿಸಿತು. ಯಾವುದೇ ಸಮಸ್ಯೆ ಇಲ್ಲದಿದ್ದರೂ, ನಾವು ಒಂದಲ್ಲ ಒಂದು ಸಮಸ್ಯೆಯನ್ನು ಸೃಷ್ಟಿಸಿ ಅದನ್ನು ನಮ್ಮ ಮೇಲೆ ಹಾಕಿಕೊಳ್ಳುತ್ತೇವೆ. ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು ಒಂದಲ್ಲ ಒಂದು ಸ್ವಯಂ ಅಪರಾಧದಿಂದ ತಮ್ಮ ಶಾಂತಿಯನ್ನು ಹಾಳು ಮಾಡಿಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾನೆ.
0 ಸಮಾಜದ ತಳಮಟ್ಟದಲ್ಲಿರುವ ಜನರು ಮತ್ತು ಎಲ್ಲಾ ಸ್ಥಾನಮಾನ, ಸೌಲಭ್ಯಗಳನ್ನು ಪಡೆಯುವವರು ಸಹ ಹಾಗೆ ಬದುಕುತ್ತಾರೆ ಎಂಬ ಆದರ್ಶವನ್ನು ಅನುಸರಿಸುವುದು ಕಷ್ಟ. ನಮಗೆ ತಿಳಿದೋ ತಿಳಿಯದೆಯೋ, ನಾವು ಒಂದಲ್ಲ ಒಂದು ಸಾಮಾಜಿಕ ಮತ್ತು ಆರ್ಥಿಕ ಸವಲತ್ತುಗಳನ್ನು ಅನುಭವಿಸಿದ್ದೇವೆ. ಆದರೆ ಕನಿಷ್ಠ ಪಕ್ಷ ನಮ್ಮ ಸೌಕರ್ಯಗಳು ಮತ್ತು ಅನುಕೂಲಗಳು ಇತರರಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು.
ಲೇಖಕರ ಬರವಣಿಗೆಯನ್ನು ಕರ್ಮ ಎಂಬ ಪುಸ್ತಕವನ್ನು ಓದಿ ಅರಿತಿದ್ದ ನಾನು ಮೊನ್ನೆ ಹೀಗೇ ಸಪ್ನ ಬುಕ್ ಹೌಸ್ ಗೆ ಹೋದಾಗ ಅವರದ್ದೇ ಪ್ರತ್ಯೇಕವಾಗಿ ಪುಸ್ತಕವನ್ನು ಹುಡುಕಿದೆ. ಕನ್ನಡ ಸಾಹಿತ್ಯದಲ್ಲಿ ಒಂದು ವಿಭಿನ್ನ ಬರವಣಿಗೆಯ ಮೂಲಕ ಗುರುತಿಸಿಕೊಂಡಿರುವ ಕರಣಂ ಪವನ್ ಪ್ರಸಾದ್ ಅವರು ಓದುಗರಿಗೆ ವಿಭಿನ್ನ ರುಚಿಯ ಮೂಲಕ ಓದುಗರ ಮನಸನ್ನು ಗೆದ್ದಿದ್ದಾರೆ ಎಂದರೇ ತಪ್ಪಾಗಲಾರದು.
ಈ ಸತ್ತು ಪುಸ್ತಕದ ಮೊದಲ ಅಧ್ಯಾಯವು ನನ್ನ ಗಮನವನ್ನು ಕೇಂದ್ರೀಕರಿಸುವಂತೆ ಮಾಡಿದೆ. ಈ ಕಥೆಯಲ್ಲಿ ಬರುವ ಎಲ್ಲಾ ಪತ್ರಗಳು ನಮ್ಮ ಕಣ್ಣ ಮುಂದೆ ದೃಶ್ಯಗಳ ಹಾಗೆ ಹಾದು ಹೋಗುತ್ತವೇ. ನೋಡುವ ಮುಂದೆ ಈ ಪುಸ್ತಕವನ್ನು ಮುಗಿಸಿ ನಂತರ ನನ್ನ ಮುಂದಿನ ವಿಮರ್ಶೆಯನ್ನು ತಿಳಿಸುವೆ.
ಕನ್ನಡಕ್ಕೆ ಇಂಥಹ ವಿಭಿನ್ನ ಬರವಣಿಗೆಗಳ ಅವಶ್ಯಕತೆಯಿದೆ.
ನಿಮ್ಮ ಓದುಗರಿಗೆ ಇನ್ನು ಹೆಚ್ಚು ಬರವಣಿಗೆಯ ರುಚಿಯನ್ನು ನೀಡಿ.
ಕರಣಂ ಪುಸ್ತಕಗಳ ಅಭಿಮಾನಿಯಾದ ನಾನು ತಡಮಾಡದೆ ಕೊಂಡು ಓದಿದ ಪುಸ್ತಕವಿದು ಯಾಕೆಂದರೆ ಅವರ ಹಿಂದಿನ ಎಲ್ಲಾ ಪುಸ್ತಕಗಳು ಓದಿಸಿಕೊಂಡು ಹೋದ ಪರಿ ಅದ್ಭುತ. ಈ ಪುಸ್ತಕದ ಪುಟಗಳು ಬಹಳ ಕಡಿಮೆ ಆದ್ದರಿಂದ ಬಹಳ ಬೇಗ ಓದಿ ಮುಗಿಸಿದೆ ಆದರೆ ಪುಸ್ತಕ ಓದಿ ಮುಗಿಸಿದ ಮೇಲು ಕಥೆ ಯಾಕೋ ಗೋಜಲು ಅನಿಸಿತು ವಿಷಯಗಳ ಆಯ್ಕೆ ಬಹಳ ಸಂಕೀರ್ಣ ಅಂತ ನನ್ನ ಅನಿಸಿಕೆ ಅಥವಾ ಇನ್ನಷ್ಟು ಪುಟಗಳ ��ಗತ್ಯವಿತ್ತೇನೊ ಹಾಗು ಕೆಲವು ಕಡೆ ತಪ್ಪು ಅಕ್ಷರಗಳು ಕಂಡವು ನಾನು ಪಾತ್ರಧಾರಿಗಳು ಬೆಂಗಾಲಿ ಮತ್ತು ತಮಿಳು ಭಾಷಿಕರು ಆದ್ದರಿಂದ ಸರಿ ಇರಬಹುದೇನು ಅಂದುಕೊಂಡೆ.
ಕರಣಂ ಪವನ ಪ್ರಸಾದ್ ರವರ ಇತರೆ ಕಾದಂಬರಿಗಳನ್ನು ಓದಿದ್ದ ನನಗೆ, ಈ ಕಾದಂಬರಿ ಅಷ್ಟಾಗಿ ಹಿಡಿಸಲಿಲ್ಲ. ಬಹುಶಃ ನನ್ನ ನಿರೀಕ್ಷೆಯೇ ಹೆಚ್ಚಾಯಿತು ಅನ್ನಿಸುತ್ತೆ. ಇರಲಿ. ಅನವಶ್ಯಕ ಎಳೆಗಳು ಕಾದಂಬರಿಯ ಪಥ ತಪ್ಪಿಸಿವೆ. ಹಾಗೆಯೇ, ಪುಟ್ಟ ಕಾದಂಬರಿಯಲ್ಲಿ ಕಥಾಹಂದರವನ್ನು ಅಷ್ಟು ತೀವ್ರವಾಗಿ ಹಿಂದಕ್ಕೂ ಮುಂದಕ್ಕೂ ಜಗ್ಗಾಡಿಸುವ ಅವಶ್ಯಕತೆ ಇರಲಿಲ್ಲ.