ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ಜಾನಪದ ಸೊಗಡನ್ನು ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಹಾಡುಗಾರ, ಅಧ್ಯಾಪಕ, ಜಾನಪದ ತಜ್ಞ ಹೀಗೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಸಮಗ್ರ ಸಾಹಿತ್ಯಕ್ಕೆ ೨೦೧೦ ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿತು.
ಮೊನ್ನೆ ರಂಗಶಂಕರದಲ್ಲಿ 'ಜೋಕುಮಾರಸ್ವಾಮಿ'ಯ ಪ್ರದರ್ಶನ ಇತ್ತು. ನೋಡಲೇ ಬೇಕು ಅಂತ ಬುಕ್ ಮಾಡಿದ್ದೇನೊ ಆಯ್ತು, ಆದ್ರೆ ನಾನು ಈ ನಾಟ್ಕ ಓದಿರ್ಲಿಲ್ಲವೇ! ಸರಿ, ನಾಟ್ಕಕ್ಕಿನ್ನೂ ಒಂದ್ವಾರ ಇದೆ, ಓದೋಣ ಅಂತ ಅಂತರ್ಜಾಲದಲ್ಲಿ ಸ್ವಲ್ಪ ತಡ್ಕಾಡಿದ್ಮೇಲೆ ಒಂದು ಪಿ.ಡಿ.ಎಫ್. ಸಿಕ್ತು. ಹೀಗೆ ಓದಿದ ಮೇಲೇ ತಿಳಿದ್ದದ್ದು ನಾಟ್ಕ ಯಾವ್ದ್ರ ಕುರಿತು ಹೇಳ್ತಾವುಂಟು ಅಂತ! (clueless ಆಗಿ ಯಾವುದೇವೊಂದು ನಾಟ್ಕಕ್ಕೆ ಹೋಗೊದು ನಂಗೆ ಇಷ್ಟವಾಗೊದಿಲ್ಲ)
'ಉಳುವವನೆ ಹೊಲದೊಡೆಯ' ಎನ್ನುವ ಧೋರಣೆ ಒಂದ್ಕಡೆಯಾದ್ರೆ, ದುರುಳ ಹಾಗೂ ಅನ್ಯಾಯುತ ಊಳಿಗಮಾನ್ಯ ಪದ್ಧತಿ. ಈ ಎರಡರ ತಿಕ್ಕಾಟವೇ ಇಲ್ಲಿನ ಕಥಾಹಂದರ. ಸೌಮ್ಯತೆಗೆ ಬಸಣ್ಯನಾದರೆ, ಕ್ರೌರ್ಯತೆ ಮೆರೆಯಲು ಡಂಡಂ ಗೌಡ. ಈ ತಿಕ್ಕಾಟದ ಜೊತೆಗೆ, ಪ್ರೇಮಿಸಿದವನೇ ಗರತಿಯ ಒಡೆಯನಾಗ್ಬೇಡವೇ? ಎನ್ನುವ ನೈತಿಕ ಪ್ರಶ್ನೆಯನ್ನೂ ಕಂಬಾರರು ರಸಿಕರಮುಂದಿಟ್ಪಿದ್ದಾರೆ. ಭಾಷೆ ಸ್ವಲ್ಪ್ ಅಶ್ಲೀಲ ಅಂತ್ತೆನ್ನಿಸಿದ್ರೂ, ಸಂದರ್ಭಾನುಸಾರ ಅದು ಸರಿಯಿದೆ ಎನ್ನಬೌದು.
ಬಿ. ವಿ. ಕಾರಂತರ ನಾಟ್ಕ ಅಂದ್ಮೇಲೆ ಕೇಳ್ಬೇಕೆ? ಟಿ. ಎಸ್. ನಾಗಾಭರಣರ ಸಾರಥ್ಯದಲ್ಲಿ, ಈ ನಾಟ್ಕ ೬೦೩ನೇ ಪ್ರದರ್ಶನವಾಗಿ ಮೂಡಿಬಂದ. ತಾಳ-ಮ್ಯಾಳ, ಹಾಡು ಕುಣಿತದೊಂದಿಗೆ ಸಾಗುವ ಈ ನಾಟ್ಕ ಕಣ್ಣಿಗೆ ಹಬ್ಬವನ್ನೇ ನೀಡ್ತು ಎನ್ನಬಹುದು. ರಂಗ ಪ್ರದರ್ಶನನ ಮುಂದು ನಾಟ್ಕ ಓದಿದ್ದು ಒಳ್ಳೆಯದೇ ಆಯ್ತು. ಇಲ್ಲಾಂದ್ರೆ, ಎಷ್ಟೋ ಹಾಡುಗಳ ಅರ್ಥ ತಿಳೀತಿರ್ಲಿಲ್ಲ. ನಾಟ್ಕದಲ್ಲಿ ಎಲ್ಲಾ ಪಾತ್ರಗಳ ನಿರ್ವಹಣೆಯೂ ಚೆನ್ನಾಗಿತ್ತು ಆದ್ರೆ 'ಗುರ್ಯ' ಪಾತ್ರ ನಂಗಿಷ್ಟ ಆಯ್ತು. ಅದರ ಪಾರ್ಟ್ ಮಾಡಿದ ಕಲಾವಿದ, ಹಾಸ್ಯ ಮತ್ತು ಕಾರುಣ್ಯದ ಸನ್ನಿವೇಶಗಳನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ರು.
ಈ ಸಂದರ್ಭದಲ್ಲಾದ ಒಂದು ಸಂಗತಿನ ಇಲ್ಲಿ ಪ್ರಸ್ತಾಪ ಮಾಡ್ತಿದಿನಿ, ನಾಟ್ಕದ ಮಧ್ಯೆ ಹತ್ತು ನಿಂಶ ವಿರಾಮ ಇತ್ತು ಆಗ ನನ್ನ ಹಿಂದೆ ಕೂತ ಒಂದು ಗುಂಪಿನ ಸಂವಾದ ನನ್ನ ಕಿವಿಗೆ ಬಿತ್ತು. ಅಲ್ಲಿ ಒಬ್ಬ ತಾಯಿ, "ಅಯ್ಯೋ ಇದೇನೋ ಕುಮಾರಸ್ವಾಮಿದು ನಾಟ್ಕ ಅಂತ ಬಂದೆ" ಎಂದಕ್ಕೆ ಇನ್ನೊಬ್ಬರು, "ನನು ಜೋಕುಮಾರಸ್ವಾಮಿ ಅಲ್ವಾ, ಜೋಕ್ ಇರ್ಬೋದೇನೊ ಅಂನ್ಕೊಂಡೆ" ಎಂದರು. ಅದಕ್ಕೆ ಮಗದೊಬ್ಬರು, "ಸಧ್ಯ, ನೀವು ದೇವೇಗೌಡ್ರ ಮಗುಂದು ಸ್ಟೋರಿ ಅಂನ್ಕೊಂಡು ಬರಲಿಲ್ಲ್ವಲ್ಲ!" ಅಂತೆಂದು ನಕ್ಕರು. ಅದನ್ನ ಕೇಳಿ ಮೊದಲಿನವರು, "ಏನೋ ಫೇಮಸ್ಸು ಅಂತ ಬಂದ್ರೇ, ಬರೀ ಕೆಟ್ಟ ಪದ, ಬರೀ ಸೂಳೆ, ರಂಡೆ ಅಂತಾನೇ ಇದೆ; ಇದುನ್ನಾ ಇವ್ರು ಎರಡು ವರ್ಷ್ದಿಂದ ನೋಡ್ಬೇಕು ಅಂತ್ತಿದ್ರು", ಎಂದು ನಾಟ್ಕದ ಹಾಗೂ ಹೊರಹೋಗಿದ್ದ ಅವರ ಗಂಡನ ಕುರಿತೆಂದರು. ನಂಗೆ ನಗ್ಬೇಕಾ? ಬಿಡ್ಬೇಕಾ? ಅಂತ ಗೊಂದಲ ಆಯ್ತು. ನಾಟ್ಕ ಮುಗ್ದ್ಮೇಲೆ ಇದ್ಯಾರಪ್ಪ ಎಂದು ಗಮನ್ಸ್ದೆ; ಅವರ ಯಜಮಾನರು ಮಾತ್ರ ಚಪ್ಪಾಳೆ ತಟ್ಟಿ, ಮೆಚ್ಚುಗೆ ವ್ಯಕ್ತಪಡಿಸ್ದಂಗಿತ್ತು...!
ಹಳ್ಳಿಯ ಬಡವರ ಹೊಲಗಳನ್ನ ಸಾಲದ ನೆಪವೊಡ್ಡಿ ತನ್ನ ಹೆಸರಿಗೆ ಮಾಡಿಕೊಳ್ಳುವ ಮತ್ತು ಕಂಡ ಕಂಡ ಹೆಣ್ಣುಗಳ ಮೇಲೆ ಕೈ ಹಾಕುವ ಚಪಲ ಗೌಡ. ಮದುವೆಯಾಗಿ ಹತ್ತು ವರ್ಷವಾದರೂ ಮಕ್ಕಳಿಲ್ಲದೆ ಕೊರಗುವ ಗೌಡತಿ. ವರ್ಷಗಳಿಂದ ಊಳುತ್ತ ಬಂದಿದ್ದ ಹೊಲಕ್ಕಾಗಿ ಗೌಡನಿಂದ ಕೊಲೆಯಾದ ತಂದೆಯ ಸೇಡನ್ನು ತೀರಿಸಿಕೊಳ್ಳಬೇಕೆಂಬ ಬಸಣ್ಣ್ಯಾ. ಇದೆಲ್ಲದರ ನಡುವೆ ಬರುವ ಫಲ ಕೊಡುವ ದೇವರು ಜೋಕುಮಾರಸ್ವಾಮಿ. ಹೊಲೆಯರ ಹೆಂಗಸು ಹೇಳುವ ದೇವರ ಕತೆ ಕೇಳಿ ತಾನೂ ಸ್ವಾಮಿಗೆ ಪಲ್ಲೆ ಮಾಡಿ ಗಂಡನಿಗೆ ತಿನಿಸಿದರೆ ಮಕ್ಕಳಾಗುವೆಂದು ಗೌಡತಿ ಹುಣ್ಣಿಮೆಯ ದಿನ ಜೋಕುಮಾರಸ್ವಾಮಿಯನ್ನು ಮನೆಗೆ ತರುತ್ತಾಳೆ. ಆದರೆ ಹೊಲದಲ್ಲಿ ಮಲಗಿದವನು ಗೌಡನೆಂದು ತಿಳಿದು ಬಸಣ್ಣ್ಯಾಗೆ ಪಲ್ಲೆ ತಿನಿಸಿ ಅವನ ಬಲೆಗೆ ಬೀಳುತ್ತಾಳೆ. ಇದನ್ನು ತಿಳಿದು ಕೋಪದಿಂದ ತನ್ನ ಆಳುಗಳನ್ನ ಕಳುಹಿಸಿ ಗೌಡ ಬಸಣ್ಣ್ಯಾನನ್ನು ಕೊಲ್ಲಿಸುತ್ತಾನೆ. ಊಳುವವನೇ ಹೊಲದೊಡೆಯ ಎಂಬಂತೆ ನಿಜವಾಗಿ 'ಪ್ರೀತಿ'ಸುವವನೇ ಗಂಡನ್ಯಾಕಾಗಬಾರದು ಎಂಬರ್ಥದಲ್ಲಿ ನಾಟಕ ಸಾಗುತ್ತದೆ. ಕಂಬಾರರ ದೇಸಿ ಶೈಲಿಯ ಸಂಭಾಷಣೆಗಳು, ಹಿನ್ನೆಲೆಯಲ್ಲಿ ಬರುವ ಮೇಳದವರ ಗೀತೆಗಳು ನಾಟಕದ ಶ್ರೀಮಂತಿಕೆಗೆ ಹಿಡಿದ ಕನ್ನಡಿ.