ಚಿತ್ತಾಲರ ಈ ಕಾದಂಬರಿ ಪ್ರಕಟವಾಗಲಿದೆ ಎಂಬ ಸುದ್ದಿ ಬಂದಾಗಿನಿಂದ ಕುತೂಹಲವಿತ್ತು. “ಮುಗಿಯಿತು” ಎನ್ನುವ ಮುದ್ರೆ ಬೀಳದ, ಅದೂ ಚಿತ್ತಾಲರಂತಹ ಸದಾ ಎಚ್ಚರದ ಲೇಖಕರ ಅಪೂರ್ಣ ಕಾದಂಬರಿ, ಅವರ ಕಾರ್ಯವೈಖರಿಯ ಬಗ್ಗೆ ಕೊಡಬಹುದಾದ ಸುಳುಹುಗಳ ಕುರಿತ ಕುತೂಹಲ ಇದು.
ಚಿತ್ತಾಲತನದ ಹಲವು ಆಯಾಮಗಳು - ಮುಂಬೈ ಪರಿಸರ, ಕನ್ನಡಕ್ಕೆ ಅತಿಥಿಗಳಂತೆ ಅವರು ಕರೆತರುವ ಶಬ್ದಗಳು, ಎಲ್ಲಕ್ಕೂ ಹೆಚ್ಚಾಗಿ ಸಾಮಾನ್ಯ ಎನಿಸುವ ಸಂಗತಿಗಳೇ ನಿಗೂಢವಾಗುವ ವಿಸ್ಮಯ ಈ ಕಾದಂಬರಿಯಲ್ಲಿ ಇನ್ನಷ್ಟು ಸ್ಪುಟವಾಗಿವೆ.
ಕತೆಯ ಬೆನ್ನು ಹತ್ತಿ ಹೋಗುವ ಓದುಗರಿಗಿಂತಲೂ ಕಥನದ ಪ್ರಕ್ರಿಯೆಯ ಹಿಂದೆ ಬಿದ್ದವರಿಗೆ ಹೆಚ್ಚು ಪ್ರಿಯವಾಗಬಲ್ಲ ಕಾದಂಬರಿ. ಕಥೆ ಪೂರ್ತಿಯಾಗುವುದಿಲ್ಲ ಎನ್ನುವುದು ತಿಳಿದಿದ್ದರೂ ಕೊನೆ((?)ತನಕ ಓದುವ ಕುತುಹಲ, ಮುಗಿಸಿದ ಮೇಲೆ ಕಥೆಯ ಮುಕ್ತಾಯ ಏನಿರಬಹುದಿತ್ತು ಎನ್ನುವ ಊಹಾಪೋಹ, ಏನಿರಬೇಕು ಎನ್ನುವ ಆಶಯ.. ಹುಟ್ಟದಿರುವುದಿಲ್ಲ.
ವಾಸ್ತವದಲ್ಲಿ ಯಾವ ಕಥೆಯೂ ಮುಕ್ತಾಯವಾಗುವುದಿಲ್ಲ. “ಈವರೆಗೆ ಮಂಡಿಸಿದ ವಾದ-ವಿವಾದಗಳನ್ನು ಪರಿಶೀಲಿಸಿದ ನಂತರ…” ಎಂದು ನ್ಯಾಯಾಧೀಶರು ತೀರ್ಮಾನ ಕೊಡುವ ಹಾಗೆ ಲೇಖಕನೋ, ಓದುಗರೋ ಆ ಕತೆಯನ್ನು ಮುಗಿಸಿ ಮತ್ತೊಂದನ್ನು ಎತ್ತಿಕೊಳ್ಳುತ್ತಾರೆ. ಬೇಕಾದಾವಾಗ ಮತ್ತೆ ಅದೇ ಅಥವಾ ಮತ್ತೊಂದು ರೂಪದಲ್ಲಿ ಕಥೆ ಮುಂದುವರೆಯುತ್ತದೆ. ಹಾಗಾಗಿ ಕಾದಂಬರಿಗೆ ಘೋಷಿತ ಮುಕ್ತಾಯವಿಲ್ಲ ಎನ್ನವುದು ಒಂದು ಸಮಸ್ಯೆಯಾಗುವುದಿಲ್ಲ. ಚಿತ್ತಾಲರ ಜಗತ್ತಿನ ಇನ್ನೂ ಕೆಲವು ಮುಖಗಳನ್ನು, ಆಯಾಮಗಳನ್ನು ಈ ಕಾದಂಬರಿ ತೆರೆದಿಡುವುದರಿಂದ ಇದನ್ನು ಸ್ವಾಗತಿಸಬೇಕು. ಚಿತ್ತಾಲರು ಸೃಷ್ಟಿಸಿದ ಜಗತ್ತಿನ ಕೊನೆಯ ಕಂತಾದ ಈ “ದಿಗಂಬರ” ಇಲ್ಲದೇ ನಮ್ಮ ಓದು ಪೂರ್ತಿಯಾಗದು.
ರಾಜೇಂದ್ರ ಚೆನ್ನಿ, ವಿವೇಕ ಶಾನಭಾಗರ ಮೊದಲ ಮಾತುಗಳು, ಚಿತ್ತಾಲರ ಕೈಬರೆಹದ ಪುಟಗಳು ಕಾದಂಬರಿಗೆ ಮೆರುಗು ತಂದಿವೆ.