ಭಾರತದ ಮಹಮಾಪನದ ಕತೆಯನ್ನು ಹೇಳುತ್ತಲೇ, ಭಾರತೀಯ ಮನಸ್ಸು, ದೈವಿಕತೆ, ಅಧ್ಯಾತ್ಮವನ್ನು ಹೇಳುವ ಕಾದಂಬರಿ ಪ್ರಮೇಯ. ಇದರ ಹರಹು ಮತ್ತು ಆಳ ನನ್ನನ್ನು ಅಚ್ಚರಿಗೊಳಿಸಿದೆ. ಇದು ಹಿಮಾಲಯವನ್ನು ಅಳೆದ ಕತೆ. ವೈಜ್ಞಾನಿಕ ಜಗತ್ತು ಭಾರತದ ಮಹಾಮಾಪನವನ್ನು ಗ್ರೇಟ್ ಟ್ರಿಗ್ನೋಮೆಟ್ರಿಕ್ ಸರ್ವೆ ಎಂದು ಕರೆಯಿತು. ಆ ಯೋಜನೆಯನ್ನು ಮುನ್ನಡೆಸಿದ ಕರ್ನಲ್ ಲ್ಯಾಂಬ್ಟನ್, ಜಾರ್ಜ್ ಎವರೆಸ್ಟ್, ಆಡ್ರ್ಯು ವಾ, ಥಾಮಸ್ ಜಾರ್ಜ್ ಮತ್ತು ನೈನ್ ಸಿಂಗರ ಕಷ್ಟಸುಖದ ಕತೆಯನ್ನು ಹೇಳುತ್ತಲೇ ಭಾರತದ ಕತೆಯನ್ನೂ ಗಜಾನನ ಶರ್ಮರು ಹೇಳುತ್ತಾರೆ.
ಇಂಥದ್ದೊಂದು ವಸ್ತುವನ್ನು ಆಧರಿಸಿದ ಮೊದಲ ಭಾರತೀಯ ಕಾದಂಬರಿ ಇದು. ಚರಿತ್ರೆ ಮತ್ತು ಕಲ್ಪನೆ ಎರಡನ್ನೂ ಹದವಾಗಿ ಬೆರೆಸುತ್ತಾ, ಚಾರಿತ್ರಿಕ ವಿವರಗಳಿಗೆ ಅಪಪ್ರಚಾರ ಆಗದಂತೆ, ಕಾಲಾನುಭವಕ್ಕೆ ಕುಂದಾಗದಂತೆ ಈ ಕಥೆಯನ್ನು ಗಜಾನನ ಶರ್ಮ ಕಟ್ಟಿದ್ದಾರೆ. ಕ್ಲುಪ್ತ ವಿವರ, ಸ್ಪಷ್ಟ ಮಾಹಿತಿ, ಸಮರ್ಪಕ ಕ್ಷೇತ್ರಾಧ್ಯಯನ, ಅನುಪಮ ಶ್ರದ್ಧೆ ಮತ್ತು ಸರಳ ಭಾಷೆ ಹುರಿಗಟ್ಟಿರುವ ಕಾದಂಬರಿ ಅನಾವರಣ ಮಾಡುತ್ತದೆ.
ಡಾ| ಗಜಾನನ ಶರ್ಮಾರವರು ಪ್ರಸಿದ್ಧ ನಟ, ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿಯು ಹೌದು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದರು ಕನ್ನಡ ಸಾಹಿತ್ಯದ ಹಲವಾರು ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ’ಪುನರ್ವಸು’ ಇವರ ಪ್ರಮುಖ ಕಾದಂಬರಿ. 'ನಾಣಿ ಭಟ್ಟನ ಸ್ವರ್ಗದ ಕನಸು', 'ಗೊಂಬೆ ರಾವಣ', ಆಗ ಮತ್ತು ಸುಂದರಿ', 'ಹಂಚಿನಮನೆ ಪರಸಪ್ಪ', 'ಪುಸ್ತಕ ಪಾಂಡಿತ್ಯ' ಮುಂತಾದ ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕ, 'ಕನ್ನಂಬಾಡಿಯ ಕಟ್ಟದಿದ್ದರೆ', 'ದ್ವಂದ್ವ ದ್ವಾಪರ', 'ಬೆಳ್ಳಿಬೆಳಕಿನ ಹಿಂದೆ' ಮುಂತಾದ ನಾಟಕಗಳನ್ನು ರಚಿಸಿದ್ದಾರೆ.
ವಿಶ್ವೇಶ್ವರಯ್ಯನವರ ವೃತ್ತಿ ಜೀವನದ ಆತ್ಮಕಥೆಯನ್ನು ಕನ್ನಡಕ್ಕೆ 'ನನ್ನ ವೃತ್ತಿ ಜೀವನದ ನೆನಪುಗಳು' ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. 'ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ' ಎಂಬ ಮಹಾಪ್ರಬಂಧಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾ ಲಯದಿಂದ ಡಾಕ್ಟೋರೇಟ್ ಪದವಿ ಪಡೆದಿದ್ದಾರೆ. ಕನ್ನಡ ಸುಗಮ ಸಂಗೀತದ ಮೇರುಪ್ರತಿಭೆ ಗರ್ತಿಕೆರೆ ರಾಘಣ್ಣನವರ ಬದುಕಿನ ಚಿತ್ರಣವಾದ 'ಕಾಡು ಕಣಿವೆಯ ಹಾಡುಹಕ್ಕಿ ಗರ್ತಿಕೆರೆ ರಾಘಣ್ಣ' ಇವರ ಇನ್ನೊಂದು ಮಹತ್ವದ ಕೃತಿ. ’ಕೈಲಾಸ ಮಾನಸ', 'ಗೋಮುಖಆಗಿ ಹೋಗುವ ಮುನ್ನ ಕಣ್ಣುಂಬಿಕೊಳ್ಳೋಣ' (ಪ್ರವಾಸ ಕೃತಿ), “ನನ್ನ ವೃತ್ತಿಯ ನೆನಪುಗಳು” ಕೃತಿಯಲ್ಲಿ ಅವರ ವೃತ್ತಿ ಬದುಕಿನ ಅನುಭವವನ್ನು ದಾಖಲಿಸಿದ್ದಾರೆ.
ಈ ಕಥೆಯ ಪ್ರಸ್ತುತತೆಯ ಕುರಿತಾದ ಸಂದೇಹವನ್ನು ಲೇಖಕರು ಆರಂಭದಲ್ಲೇ ಪ್ರಕಟಿಸುತ್ತಾರೆ. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಆಧುನಿಕ ಸೌಲಭ್ಯಗಳೂ ಉಪಗ್ರಹಗಳೂ ಇಲ್ಲದ ಸಮಯದಲ್ಲಿ ಭೂಮಾಪನವನ್ನು ಕೈಗೊಂಡವರ ಕಥೆ ಪ್ರಸ್ತುತವೇ ಎಂದು. ಆದರೆ ಕಾಲದೇಶಗಳನ್ನು ಮೀರಿದ ಮನುಷ್ಯ ಪ್ರಯತ್ನದ ಫಲ ಯಾವತ್ತಿಗೂ ಸ್ಫೂರ್ತಿದಾಯಕ ಮತ್ತದು ರೋಚಕ ಕೂಡ. ಗಜಾನನ ಶರ್ಮರು ಮಾಡಿದ ಅಧ್ಯಯನ ಕಾದಂಬರಿಯುದ್ದಕ್ಕೂ ನಮಗೆ ಕಾಣಸಿಗುತ್ತದೆ. ಅವರ ಈ ಹಿಂದಿನ ಎರಡು ಕಾದಂಬರಿಗಳೂ ಈ ರೀತಿಯ ಆಳವಾದ ಅಧ್ಯಯನದಿಂದ ರೂಪುಗೊಂಡವು. (ಪುನರ್ವಸು ಮತ್ತು ಚನ್ನಭೈರಾದೇವಿ) ಇದು ಕೂಡ.
ಟ್ರಿಗ್ನಾಮೆಟ್ರಿಕ್ ಸರ್ವೆಯ ಮುಖಾಂತರ ದೇಶದ ಉದ್ದಗಲವ ಅಳೆದ ಬ್ರಿಟಿಷ್ ಅಧಿಕಾರಿಗಳ ಮತ್ತು ಅವರಿಗೆ ಒತ್ತಾಸೆಯಾಗಿ ನಿಂತ ಭಾರತೀಯರ ಕಥೆ. ಲ್ಯಾಂಬ್ಟನ್, ಎವರೆಸ್ಟ್, ಮಾಂಟ್ಗೊಮರಿ,ಡಾ ವಾಯ್ಸೆ ಒಬ್ಬರೇ ಇಬ್ಬರೇ. ಸರಿಸುಮಾರು ಐನೂರು ಕಾರ್ಮಿಕರು, ಮೂವತ್ತಕ್ಕೂ ಹೆಚ್ಚಿನ ಅಧಿಕಾರಿಗಳು ನಾ ನಾ ಪ್ರಕೃತಿ ವಿಕೋಪ, ಪ್ರತಿಕೂಲ ಹವಾಮಾನ, ಅನಾರೋಗ್ಯ ಇವೆಲ್ಲ ಎದುರಿಸಿ ಜೀವ ತೆತ್ತು ಮಾಡಿದ ಈ ಸರ್ವೆಯ ಸಮಗ್ರ ಕಥೆ ಇದು.ಇಲ್ಲಿ ಬರುವ ಹೆಚ್ಚಿನ ಪಾತ್ರಗಳು ಕಾಲ್ಪನಿಕವಲ್ಲ. ಹಾಗೆಂದು ಇದು ಬರೀ ಅವರ ಹೊಗಳಿಕೆಯ ಪುಸ್ತಕ ಅಲ್ಲ. ಬ್ರಿಟಿಷ್ ಅಧಿಕಾರಿಗಳ ದರ್ಪ, ಅವರ ಗುಣವಾಗುಣಗಳು ,ಭಾರತೀಯತೆಯ ಹಿರಿಮೆಯನ್ನು ಕೂಡ ಲೇಖಕರು ಎಳೆ ಎಳೆಯಾಗಿ ಬಿಚ್ಚಿ ಹೇಳುತ್ತಾರೆ.
ಕನ್ನಡದ ಮಟ್ಟಿಗೆ ಅಧ್ಯಯನ ಮಾಡಿ ಬರೆಯುವುದು ಮರೆಯಾಗುತ್ತಿರುವ ಸಂದರ್ಭದಲ್ಲಿ ಈ ಕೃತಿಯ ಮಹತ್ವ ಹೇಳಿ ಮುಗಿಸುವಂತದ್ದಲ್ಲ.
ಜನಮಾನಸದಿಂದ ಕ್ರಮೇಣ ಮಾಯವಾಗಿ ಹೋದ,ಇಂದಿನ ಜನಾಂಗದ ಅರಿವಿನಲ್ಲಿಯೇ ಇರದ ಐತಿಹಾಸಿಕ ಘಟನೆಗಳನ್ನು ಆಧರಿಸಿ ಸತ್ಯಾಂಶಗಳು ಏರುಪೇರಾಗದಂತೆ ಕಲ್ಪನೆಯನ್ನು ಹದವಾಗಿ ಬೆರೆಸಿ ಓದುಗರಿಗೆ ರಸದೌತಣವನ್ನು ಉಣಬಡಿಸುವಲ್ಲಿ ಡಾ.ಗಜಾನನ ಶರ್ಮ ಅವರು ಪ್ರಮುಖರು. ಅವರು ಆಯ್ದುಕೊಳ್ಳುವ ವಿಚಾರಗಳ ಫಲಾನುಭವಿಗಳು ನಾವಾದರೂ ಅದರ ಬಗೆಗಿನ ಮಾಹಿತಿಯ ಕೊರತೆ ಮತ್ತು ಉದಾಸೀನತೆ ದುರದೃಷ್ಟಕರ. ಶರಾವತಿ ವಿದ್ಯುತ್ ಯೋಜನೆಯ ಕುರಿತಾದ "ಪುನರ್ವಸು", ಇಡೀ ದೇಶವೇ ಹೆಮ್ಮೆ ಪಡಬಹುದಾದಂತೆ ಐವತ್ನಾಲ್ಕು ವರ್ಷಗಳ ಕಾಲ ಪೋರ್ಚಗೀಸರೊಡನೆ ಹೋರಾಡಿದ ದಿಟ್ಟ ಮಹಿಳೆ "ಚೆನ್ನಭೈರಾದೇವಿ"ಯಂತಹ ಕಾದಂಬರಿಯನ್ನು ಕೊಟ್ಟಂತಹ ಶರ್ಮ ಅವರು ಸುಮಾರು ಏಳು ದಶಕಗಳ ಕಾಲ ನಡೆದ ಇಡೀ ಭರತಖಂಡದ "ತ್ರಿಕೋನಮಿತಿ ಮಹಾಮೋಜಣಿ"(ದಿ ಗ್ರೇಟ್ ಟ್ರಿಗ್ನಾಮೆಟ್ರಿಕಲ್ ಸರ್ವೆ ಆಫ್ ಇಂಡಿಯಾ)ಯ ಕಥೆಯನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಕೃತಿ "ಪ್ರಮೇಯ"...
1799ರ ಆಂಗ್ಲೋ ಮೈಸೂರು ಯುದ್ಧದ ನಂತರ ಭಾರತದ ಆಯಕಟ್ಟಿನ ಜಾಗಗಳನ್ನು ಗುರುತಿಸುವ ಮತ್ತು ತೆರಿಗೆ ಸೋರಿಕೆಯನ್ನು ತಡೆಗಟ್ಟುವುದು ಈ ಸರ್ವೆಯ ಪ್ರಾರಂಭಿಕ ಉದ್ದೇಶವಾಗಿತ್ತು. ಇದು ಹಂತಹಂತವಾಗಿ ಮುಂದುವರೆಯುತ್ತಾ ಹೋದಂತೆ ರಾಜಕೀಯ ಲಾಭಕ್ಕಾಗಿ ಇಡೀ ಭಾರತ ದೇಶವನ್ನು ಈಸ್ಟ್ ಇಂಡಿಯಾ ಕಂಪನಿ ನೇತೃತ್ವದ ಸರ್ಕಾರ ಸರ್ವೆಗೆ ಒಳಪಡಿಸಲು ತೀರ್ಮಾನಿಸಿತು. ಇಂತಹ ಲಾಭಗಳಿದ್ದರೂ ಇಂದಿಗೂ ಇದೇ ಸರ್ವೆಯ ರೆಫರೆನ್ಸ್ ಪಾಯಿಂಟುಗಳ ಆಧಾರದ ಮೇಲೆ ಇಂದಿಗೂ ನಮ್ಮ ಕಂದಾಯ ಇಲಾಖೆಯ ಸರ್ವೆಗಳು, ವೈಯಕ್ತಿಕ ಜಮೀನಿನ ಸರ್ವೆಗಳು ಮತ್ತು ಅಳತೆಗಳು ನಡೆಯುವುದು ಎಂಬುದನ್ನು ಗಮನಿಸಿದಾಗ ಇದೊಂದು ಬ್ರಿಟಿಷರು ನಮಗೆ ಕೊಡಮಾಡಿದ ಮಹತ್ವದ ಕೊಡುಗೆ ಎಂದರೆ ಅತಿಶಯೋಕ್ತಿಯಾಗಲಾರದು.
ಪ್ರಸ್ತುತ ಕಾದಂಬರಿಯ ಕುರಿತು ಹೇಳುವುದಾದರೆ ಸಮಗ್ರ ಭಾರತವನ್ನು ಬ್ರಿಟಿಷರು ಸುಮಾರು ಎಪ್ಪತ್ತು ವರ್ಷಗಳ ಕಾಲ ಅಳತೆ ಮಾಡಿದರು ಎಂಬುದು ಒಂದು ಸಾಲಿನ ಕಥೆ. ಆದರೆ ಈ ಅಳತೆಯ ಬಗ್ಗೆ ಹೇಳುತ್ತಾ ಮನುಷ್ಯನ ಸಹಜ ಗುಣಾವಗುಣಗಳನ್ನು, ಸ್ವಭಾವಗಳನ್ನು ಸಹ ಅಳತೆಗೋಲಿನ ಅಡಿಯಲ್ಲಿ ತರುವ ಮೂಲಕ ವಿಶ್ಲೇಷಿಸುವುದು ಕೃತಿಯ ಹೆಗ್ಗಳಿಕೆ. ಭಾರತದಂತಹ ವಿಶಿಷ್ಟ ಭೌಗೋಳಿಕ ಮೇಲ್ಮೈಯನ್ನು ಹೊಂದಿರುವ,ವಿಶಿಷ್ಟ ಹಾಗೂ ವಿಭಿನ್ನ ಸಂಸ್ಕೃತಿಯ ದೇಶವನ್ನು ಅಳೆಯುವುದು ಸವಾಲಿನ ಕೆಲಸ. ಸರ್ವೆಯ ಮೊದಲ ಹಂತದಲ್ಲಿ ಸಂಪೂರ್ಣವಾಗಿ ಭಾರತೀಯರನ್ನು ಕಡೆಗಣಿಸಿದ್ದು, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಪನಂಬಿಕೆಯನ್ನು ಬೆಳೆಯಲು ಬಿಟ್ಟದ್ದು ಒಂದು ಕಡೆಯಾದರೆ, ಇನ್ನೊಂದು ಕಡೆ ಬಿಸಿಲು,ಮಳೆ,ಛಳಿ,ಗಾಳಿ ಹಿಮಪಾತ, ಬೆಟ್ಟ ಗುಡ್ಡ ಗಿರಿಕಂದರಗಳನ್ನು ಮೆಟ್ಟಿ ನಿಂತು ಅಳೆಯುವುದು ಅಂದಿನ ಕಾಲಮಾನಕ್ಕೆ ಮೀರಿದ ಸಾಹಸ. ಅದರಲ್ಲಿಯೂ ಮಣಭಾರದ ಅಳತೆಯ ಸಾಧನಗಳನ್ನು ಹೇರಿಕೊಂಡು ವರ್ಷಾನುಗಟ್ಟಲೆ ಮನೆ ಕುಟುಂಬಗಳಿಂದ ದೂರವಿದ್ದುಕೊಂಡು ಪ್ರತಿಕೂಲ ಸನ್ನಿವೇಶಗಳಲ್ಲಿ ಎದುರಿಸಿದ ಸವಾಲುಗಳನ್ನು ನಿಭಾಯಿಸಿದ್ದು ಕಡಿಮೆಯ ಮಾತಲ್ಲ. ಅತೀ ಕಷ್ಟಕರವಾದದ್ದನ್ನು ತಾಳ್ಮೆ, ಶ್ರದ್ಧೆ, ಕರ್ತವ್ಯಪ್ರಜ್ಞೆ, ಬೆಂಬಿಡದೆ ಸಾಧಿಸುವ ಛಲಗಳೇ ಮುನ್ನಡೆಸಿ ಗುರಿ ಮುಟ್ಟಿಸಿದವು ಎಂಬುದು ಸ್ಪಷ್ಟ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಆತಂಕದ ಕ್ಷಣಗಳಲ್ಲಿ ಸಹ ಸರ್ವೆಯನ್ನು ನಿಧಾನವಾಗಿಯಾದರೂ ಮುಂದುವರಿಸಿದ್ದು ಈ ಯೋಜನೆಯಲ್ಲಿ ಕೆಲಸ ಮಾಡಿದವರ ಕರ್ತವ್ಯನಿಷ್ಠೆಗೆ ಸಾಕ್ಷಿ.
ಮೊದಮೊದಲು ಭಾರತೀಯರು ಯಾವುದೇ ವೈಜ್ಞಾನಿಕ ಮನೋಭಾವ ಇಲ್ಲದವರು,ಇಂತಹ ಕೆಲಸಕ್ಕೆ ಲಾಯಕ್ಕಿಲ್ಲದವರು ಎಂದು ಭಾವಿಸಿದ್ದರೂ ಬದಲಾದ ಸನ್ನಿವೇಶದಲ್ಲಿ ಅವರನ್ನು ಸೇರಿಸಿಕೊಳ್ಳಬೇಕಾಗುತ್ತದೆ. ರಾಧಾನಾಥ ಸಿಕ್ದರ್, ನೈನ್ ಸಿಂಗ್ ರಾವತ್ ಅವರು ತಮ್ಮಗಳ ಅಗಾಧ ಪ್ರತಿಭೆ ಮತ್ತು ಶ್ರದ್ಧೆಯಿಂದ ಮಹಾಮೋಜಣಿಯ ಮಹತ್ವದ ಹಂತಗಳಲ್ಲಿ ತಮ್ಮ ಕೊಡುಗೆಯನ್ನು ಸಲ್ಲಿಸಿರುವುದನ್ನು ಓದುವಾಗ ಎದೆ ತುಂಬಿ ಬಂದಿತು. ಸರಿಯಾದ ಮಾರ್ಗದರ್ಶನ ದೊರೆತರೆ ಪ್ರತಿಭೆಯೆಂಬುದು ಕಾಲದೇಶಗಳನ್ನು ಮೀರಿ ಹೊಳೆಯುತ್ತದೆ ಎಂಬುದಕ್ಕೆ ಈ ಇಬ್ಬರು ಮಾದರಿ. ಅದರಲ್ಲೂ ನೈನ್ ಸಿಂಗ್ ರಾವತ್ 1580ಮೈಲುಗಳ ಪ್ರದೇಶವನ್ನು ಬರೀ ಕಾಲ್ನಡಿಗೆಯಲ್ಲಿ ಸರಿಸುಮಾರು ಮೂವತ್ತೆರಡು ಲಕ್ಷದಷ್ಟು ಸಮ ಪ್ರಮಾಣದ ಹೆಜ್ಜೆಗಳಲ್ಲಿ ಅಳೆದನು ಎಂದಾಗ ಈ ತರಹವೂ ನಡೆದಿರಬಹುದೇ ಎಂಬ ಸಂಶಯ ಮೂಡಬಹುದು,ಯಾಕೆಂದರೆ ಎಲ್ಲವೂ ತಂತ್ರಜ್ಞಾನದ ಮೂಲಕ ಸುಲಭವಾಗಿ ನಡೆಯುವ ಕಾಲದಲ್ಲಿ ನಾವಿರುವುದು ನಮ್ಮ ಊಹೆಯ ಪರಿಧಿಯನ್ನು ಸೀಮಿತಗೊಳಿಸಿರುವುದು.
ಕೃತಿಯ ಇನ್ನೊಂದು ವಿಶೇಷ ಸರ್ವೆ ಎಂಬ ಸಪ್ಪೆ ವಸ್ತುವಿನ ನಡುವೆ ಅಧ್ಯಾತ್ಮದ ಕುರಿತು ಮೂಡಿಬಂದಿರುವ ಜಿಜ್ಞಾಸೆಗಳು. ಅಧ್ಯಾತ್ಮಕ್ಕೆ ಮತ್ತು ಮನುಷ್ಯ ಸಹಜ ಸ್ವಭಾವಗಳ ಬಗೆಗಿನ ವಿವರಗಳು ಹಾಗೂ ಗಣಿತ ಸೂತ್ರದ ಮೂಲಕ ಮಾಡಲಾದ ಭೂಮಿಯ ಅಳತೆಯ ನಡುವಿನ ವಿವರಗಳನ್ನು ತಾಳೆಹಾಕಿ ಓದುಗರ ವಿವೇಚನೆಗೆ ಬಿಡುತ್ತಾರೆ ಲೇಖಕರು. ಕೆಲವೊಂದು ಜಿಜ್ಞಾಸೆಗಳು ನಮ್ಮ ದೃಷ್ಟಿ ಕೋನವನ್ನು ಬದಲಿಸುವಷ್ಟು ಸಶಕ್ತವಾಗಿವೆ. ಈ ಕಾದಂಬರಿ ಕೇವಲ ಒಂದು ಭೂಮಿಯ ಅಳತೆ ಮಾತ್ರವಲ್ಲ, ನಮ್ಮೊಳಗಣ ಶೋಧನಕ್ಕೆ ಸಹ ದಾರಿಯನ್ನು ತೋರುತ್ತದೆ. ರಾಧಾನಾಥ ಸಿಕ್ದರ್, ನೈನ್ ಸಿಂಗ್ ರಾವತ್, ಮಾಂಟ್ಗೊಮರಿ, ಎವರೆಸ್ಟ್, ಲ್ಯಾಂಬ್ಟನ್ ಮುಂತಾದವರ ಶ್ರಮ, ಶ್ರದ್ಧೆ ಮತ್ತು ಬಲಿದಾನಗಳು ಬಹಳ ಕಾಲದವರೆಗೆ ಕಾಡುವುದು ನಿಶ್ಚಿತ.
ಈ ಕಾದಂಬರಿಯನ್ನು ಓದಿ ಮುಗಿಸಿದಾಗ ನನಗನಿಸಿದ್ದು ಇಷ್ಟು… ಬ್ರಿಟಿಷರು ನಾವಂದುಕೊಂಡಷ್ಟು ಕೆಟ್ಟವರು ಅಲ್ಲ. ಭಾರತೀಯರು ಮುಗ್ಧರು ಅಲ್ಲ. ಅವರದ್ದು ಎಂಬುದು ಎಲ್ಲವೂ ಶ್ರೇಷ್ಠವಲ್ಲ,ನಮ್ಮದೆಲ್ಲವೂ ಕನಿಷ್ಠವಲ್ಲ. ಕೃತಿಯಲ್ಲಿ ಲೇಖಕರೇ ಒಂದು ಕಡೆ ಹೇಳುವಂತೆ ಸಮುದ್ರ ಮಥನದಲ್ಲಿ ಅಮೃತ ಹುಟ್ಟಿದ ಜಾಗದಲ್ಲೇ ವಿಷವೂ ಹುಟ್ಟಿತು. ನಾವು ಯಾವುದಕ್ಕೆ ಪ್ರಾಧಾನ್ಯತೆಯನ್ನು ಕೊಡುತ್ತೇವೆ ಅದೇ ನಮ್ಮೆಲ್ಲರ ಅಭಿಪ್ರಾಯವನ್ನು ರೂಪಿಸುತ್ತದೆ. ನಮ್ಮ ಅಳತೆಯು ಯಾವ ಬಿಂದುವಿನಲ್ಲಿ ನಿಂತು ಯಾವ ಕೋನದಲ್ಲಿ ಅಳೆಯುತ್ತಿರುವೆವು ಎಂಬುದರ ಮೇಲೆ ಅವಲಂಬಿತ. ಅದು ಭೂಮಿಯಾದರೂ ಅಷ್ಟೇ… ಮನುಷ್ಯನ ಗುಣಸ್ವಭಾವಗಳಾದರೂ ಅಷ್ಟೇ…
ತಲುಪುವ ಸ್ಥಳಕ್ಕೆ ಎಷ್ಟು ದೂರ ಆಗುತ್ತೆ ಅನ್ನೋದನ್ನ ಗೂಗಲ್ ಮ್ಯಾಪ್ ಹಾಕಿ ನೋಡುವ ನಾವು, ಅದೇ ಮ್ಯಾಪ್ ಅದರಲ್ಲೂ ಭಾರತದಂತಹ ಭೌಗೋಳಿಕ ವೈವಿಧ್ಯತೆಯಿಂದ ಕೂಡಿರುವ ದೇಶದ ಮ್ಯಾಪ್ ನ್ನ ಅಳೆದುಕೊಟ್ಟವರ ಸಾಹಸ ಕಾರ್ಯವನ್ನು ಊಹಿಸಲು ಅಸಾಧ್ಯ ನಮಗೆ. ಅಂತಹ ಸಾಹಸ ಕಾರ್ಯವನ್ನು ನಮ್ಮ ಕಣ್ಮುಂದೆ ನಿಲ್ಲಿಸಿರುವ ಕೃತಿ #ಪ್ರಮೇಯ.
ಭಾರತದಂತಹ ದೇಶವನ್ನು ಅಳೆಯುವುದು ಸಾಮಾನ್ಯ ಸಂಗತಿಯಲ್ಲ. ಬಯಲು ಪ್ರದೇಶಗಳು, ಘಟ್ಟ ಪ್ರದೇಶಗಳು, ದಟ್ಟ ಅಡವಿ, ನದಿ ತೀರ ಪ��ರದೇಶಗಳು, ಬೆಟ್ಟಗುಡ್ಡಗಳು, ಯಾವುದೇ ಋತಮಾನದಲ್ಲೂ ಮಳೆ ಬೀಳುವಂತಹ ಪ್ರದೇಶಗಳು, ಹೂಡಿರುವ ಶಿಬಿರಗಳನ್ನು ಎತ್ತೊಯ್ಯವ ಮಾರುತಗಳು, ಮೈ ಕೊರೆಯುವ ಚಳಿ, ಮೈ ಆವರಿಸುವ ಮಲೇರಿಯ-ಕಾಲರದಂತಹ ರೋಗಗಳು, ಇನ್ನೂ ಆಗಾಗ ತೊಂದರೆ ಕೊಡುವ ನರಭಕ್ಷಕ ಪ್ರಾಣಿಗಳು, ವಿಷ ಜಂತುಗಳು ಇವುಗಳನ್ನೆಲ್ಲ ಎದುರಿಸಿ ಸುಮಾರು 60 70 ವರ್ಷಗಳ ಕಾಲ ನಡೆಸಿದ ಮಹಾ ಸರ್ವೆಕಾರ್ಯವಾದ ಟ್ರಿಗ್ನಾಮೆಟ್ರಿಕ್ ಸರ್ವೆಯನ್ನು ಓದಿಯೇ ಅನುಭವಿಸಬೇಕು.
ವಿಲಿಯಂ ಲ್ಯಾಂಬ್ಟನ್ ನಿಂದ ಆರಂಭವಾದ ಸರ್ವೆಕಾರ್ಯ.. ಮಹಾ ಮುಂಗೋಪಿಯಾದ ಜಾರ್ಜ್ ಎವರೆಸ್ಟ್ ನೊಂದಿಗೆ ಸಾಗಿ, ಸಜ್ಜನಿಕೆಯ ವ್ಯಕ್ತಿಯಾದ ಮಾಂಟ್ಗೋಮರಿರವರೊಂದಿಗೆ ಜೊತೆಯಾಗಿ, ಅವರಿಗೆ ಸಿಕ್ಕ ಪಂಡಿತ ನಂಬರ್ ಒನ್ ಎನಿಸಿದ, ಭಾರತದ ಬಂಗಾರದ ಗಡಿಯಾರ ನೈನ್ ಸಿಂಗ್ ನು ಅಸಾಧ್ಯ ತಾಳ್ಮೆ, ಸಾಹಸಗಳಿಂದ ಸಾವಿರಾರು ಮೈಲಿಗಳನ್ನು ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟಿ ಪೂರ್ಣಗೊಳಿಸುವುದರೊಂದಿಗೆ.. ಮುಕ್ತಾಯವಾಗುತ್ತದೆ. ಎವರೆಸ್ಟ್ ಶಿಖರವನ್ನ ಅಳೆದ ರಾಧಾನಾಥ ಸಿಕ್ದರ cameo ಎವರೆಸ್ಟ್ ಶಿಖರದಷ್ಟೇ ದೊಡ್ಡದು.
ಬ್ರಿಟಿಷರ ಶೋಷಣೆ, ಸರ್ವಾಧಿಕಾರಿ ಧೋರಣೆ ಜೊತೆಗೆ ಅವರ ಸಹಕಾರ, ಸಹಬಾಳ್ವೆ ಗುಣಗಳನ್ನು.. ಭಾರತೀಯ ಧಾರ್ಮಿಕತೆ ಅದರ ವಿರೋಧಾಬಾಸಗಳು, ಭಾರತೀಯ ಆಧ್ಯಾತ್ಮಿಕ ಚಿಂತನೆ ಹೀಗೆ ಹಲವು ವಿಷಯಗಳನ್ನು ಪೋಣಿಸಿರುವ ರೀತಿ ಅನನ್ಯವಾದದು.
ಇತಿಹಾಸವನ್ನು ಹೇಳುತ್ತಾ ಅದಕ್ಕೆ ಹದವಾಗಿ ಕಲ್ಪನೆಯನ್ನು, ಭಾರತೀಯತೆಯನ್ನು ಮಿಶ್ರಣ ಮಾಡಿ ಅತ್ಯುತ್ತಮ ಪಾಕವನ್ನ ಉಣ ಬಡಿಸಿರುವ ಲೇಖಕರಾದ ಗಜಾನನ ಶರ್ಮರವರಿಗೆ ವಂದನೆಗಳು.
ಕೃತಿ: ಪ್ರಮೇಯ - ಇದು ಆಳಿದವರ ಕಥೆಯಲ್ಲ, ಅಳೆದವರ ಕಥೆ. ಲೇಖಕರು: ಡಾ. ಗಜಾನನ ಶರ್ಮ
ಗಜಾನನ ಶರ್ಮ ರವರು ಯಾವುದೇ ಕಾದಂಬರಿಯನ್ನು ಬರೆಯುವ ಮೆದಲು ಎಷ್ಟು ಅಧ್ಯಯನ ಮಡುತ್ತಾರೆ ಹಾಗು ಕಥಾವಸ್ತು ಆರಿಸಿಕೊಂಡನಂತರ ಆ ಯಾ ಸ್ಥಳಕ್ಕೆ ಭೇಟಿ ನೀಡಿ, ಅಧ್ಯಯನ ಮಾಡಿ, ಕೆಲವು ಪಾತ್ರಗಳನ್ನು ಸೃಷ್ಟಿಸಿ ಕಾದಂಬರಿ ಮೂಲಕ ನಮ್ಮ ಮುಂದಿಟ್ಟಿರವುದಕ್ಕೆ ಪುನರ್ವಸು, ಚೆನ್ನಭೈರಾದೇವಿ, ಪ್ರಮೇಯ ಕಾದಂಬರಿಗಳೇ ಸಾಕ್ಷಿ, ನಾನು ಈ ಮೂರೂ ಪುಸ್ತಕಗಳನ್ನು ಓದಿದಾಗ ಅವರ ಅಧ್ಯಯನ, ಬರೆಯುವ ಶೈಲಿ, ಸುದೀರ್ಘ ಮುನ್ನುಡಿಯ ಜೊತೆ ಅವರು ಸೃಷ್ಟಿಸಿರುವ ಕೆಲವು ಪಾತ್ರಗಳು ಇಷ್ಟವಾದುದಲ್ಲದೇ ಅವು ನನ್ನ ಮನಸ್ಸಿನಲ್ಲಿ ಉಳಿದು ಹೋಗಿದೆ. ಇಲ್ಲಿ ಬರುವ ಥಾಮಸ್ ಮಾಂಟ್ಗೋಮಾರಿ, ನೈನ್ ಸಿಂಗ್, ಗಂಗಾಚರಣರ ಪಾತ್ರಗಳೇ ಸಾಕ್ಷಿ, ಮರೆಯಲು ಸಾಧ್ಯವಿಲ್ಲ. ಅವರೇ ಮುನ್ನುಡಿಯಲ್ಲಿ ಹೇಳಿದ ಹಾಗೆ ಈಗಿನ ಡಿಜಿಟಲ್ ಯುಗದಲ್ಲಿ, ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಈಗ ಗೂಗಲ್ ಮ್ಯಾಪ್ಸ್ ಇದೆ, ಆರ್ಟಿಪೀಷಿಯಲ್ ಇಂಟಲಿಜೆನ್ಸ್ ಎಂಬ ಯುಗದಲ್ಲಿ, ೨೦೦ ವರ್ಷಗಳ ಹಿಂದೆ ಥಿಯೋಡಲೇಟ್, ಥರ್ಮಾಮೀಟರ್, ಸರಪಣಿ, ಕಂಪಾಸ್ ಕಾಂಪನ್ಸೇಟಿಂಗ್ ಬಾರ್ ಹಿಡಿದು ಅಳೆದದ್ದರ ಕುರಿತು ಈಗಿರುವ ಕಾಲಕ್ಕೆ ತಿಳಿದಿಕೊಂಡು ಪ್ರಯೋಜವೇನಾದರೂ ಉಂಟೇ ಎಂದರೆ ಅದು ಖಂಡಿತಾ ಹೌದು. ಆಗಿನ ಕಾಲದಲ್ಲಿ ಥಿಯೋಡಲೇಟ್ ಸಾಗಿಸಲು ಎಷ್ಟು ಆನೆ, ಕುದುರೆ, ಮನುಷ್ಯರ ಸಹಾಯ ಬೇಕಿತ್ತಂದರೆ, ಸಾಗಿಸಲು ಸಾಹಸ, ಅಳೆಯುವುದೂ ಸಾಹಸವೇ. ಥಿಯೋಡಲೇಟ್ ಸಾಗಿಸಿ ಇಡೀ ಭಾರತ ಖಂಡವನ್ನು ಅಳೆಯುವುದಾದರೂ ಏಕೆ ಎಂಬ ಪ್ರಶ್ನೆಗಳಿಗೆ ಈ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಅಧ್ಯಾಯವು ಉತ್ತರ ಕೊಡುತ್ತದೆ. ಅಳೆದದ್ದರಿಂದ ಬ್ರಿಟೀಷರಿಗೆ ಅನುಕೂಲವಾದರೂ, ಈ ಜಿಟಿಎಸ್ ( ದಿ ಗ್ರೇಟ್ ಟ್ರಿಗ್ನಾಮೆಟ್ರಿಕಲ್ ಸರ್ವೆ) ಸರ್ವೆಯು ಬ್ರಿಟೀಷರಿಗಲ್ಲದೇ ಭಾರತೀಯರಿಗೂ ಅನುಕೂಲವು ಹೇಗಾಯ್ತು ಎಂಬುದೂ ಮನದಟ್ಟಾಗುತ್ತದೆ. ಈಗಿನ ಯುಗದಲ್ಲಿ ಅಳತೆ ಮಾಡಲು ನೂತನ ಕ್ರಮಗಳಿದ್ದರೂ, ತಂತ್ರಜ್ಞಾನಗಳಿದ್ದರೂ , ಅದಕ್ಕೆ ಜಿ.ಟಿ.ಎಸ್ ಸರ್ವೆಯೇ ಮೂಲ ಆಧಾರ ಎಂಬುದರಲ್ಲಿ ಸಂಶಯವೇ ಇಲ್ಲ ಎಂಬುದು ಇಡೀ ಕಾದಂಬರಿ ಓದಿದಾಗ ನಮಗೆ ಅರ್ಥವಾಗುತ್ತದೆ.
ವಾಂಗಟ್ ಕಣಿವೆಯ, ನಾರಾನಾಗ್ ಗ್ರಾಮದ ಮೂಲಕ ಹರ್ಮುಖ ಪರ್ವತವನ್ನೇರಿ ಕಾರಕೋರಂ ಕಾಶ್ಮೀರದ ಶ್ರೇಣಿಯ ಎರಡು ಶಿಖರಗಳ ಅನ್ವೇಷಣೆ ಮಾಂಟ್ಗೋಮಾರಿಗೆ ಒಂದು ದೊಡ್ಡ ಸಾಧನೆಯಾದರೂ ಹರ್ಮುಖ ಪರ್ವತವನ್ನು ಹತ್ತಿದ ಕಾರಣ ಅಲ್ಲಿರುವ ಕಾಶ್ಮೀರದ ಜನಗಳು ತಾವು ಪೂಜಿಸುವ ಹರಮುಕುಟ ಪರ್ವತವನ್ನು ಈ ಬ್ರಿಟೀಷರು ಹತ್ತಿ ಅಪವಿತ್ರ ಮಾಡಿದರೆಂದು ಇವರ ಮೇಲೆ ದಾಳಿ ಮಾಡಿದ ಪ್ರಸಂಗಗಳೂ ಉಂಟು, ಆದರೆ ಆಳುವುದಕ್ಕೆ ಬಂದ ಬ್ರಿಟೀಷರ ಮಧ್ಯದಲ್ಲಿ ಮಾಂಟ್ಗೋಮಾರಿಯ ವ್ಯಕ್ತಿತ್ವವೇ ಬೇರೆ, ಆತನಿಗೆ ಭಾರತ ದೇಶವೆಂದರೆ ಅಭಿಮಾನ, ಭಾರತೀಯ ಜನರ ನಂಬಿಕೆಗಳಿಗೆ ಸದಾ ಪ್ರೋತ್ಸಾಹಿಸುತ್ತಾ ಪ್ರತಿಯೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸದ್ಗುಣದ ಕಾರಣಕ್ಕೆ ಗಂಗಾಚರಣರು, ಸಿಕ್ದರ್ ರಂತವರಿಗೆ ತುಂಬಾ ಪ್ರೀತಿ ಪಾತ್ರರಾಗುತ್ತಾರೆ. ೧೮೦೨ರಲ್ಲಿ ಕರ್ನಲ್ ಲ್ಯಾಂಬ್ಟನ್ ಮೂಲಕ ಜಿಟಿಸ್ ಸರ್ವೆ ಆರಂಭಗೊಂಡು ಕನ್ಯಾಕುಮಾರಿಯಿಂದ ಉತ್ತರದ ಮಸ್ಸೂರಿಯವರೆಗೆ ೭೮ ಡಿಗ್ರಿ ರೇಖಾಂಶವನ್ನು ಅನುಸರಿಸಿ ಬಿಡದೆ ಸಾಗುವ ಈ ಸರ್ವೆಯಲ್ಲಿ ಲ್ಯಾಂಬ್ಟನ್, ಎವರೆಸ್ಟ್, ಕರ್ನಲ್ ವಾ, ಮಾಂಟ್ಗೋಮಾರಿ, ಜಾನ್ಸನ್ ರವರ ಕಠಿಣ ಪರಿಶ್ರಮ, ಪ್ರಾಮಾಣಿಕತೆಯ ಫಲಿತಾಂಶ ಜಿಟಿಸ್ ಸರ್ವೆಯನ್ನು ಯಶಸ್ವಿ ಗೊಳಿಸಲು ಕಾರಣವಾಗುತ್ತದೆ, ಈ ಸರ್ವೆಯ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು, ಕಾರ್ಮಿಕರು ಪ್ರಾಣ ಕಳೆದುಕೊಂಡರು, ಹೆಚ್ಚು ಮಂದಿ ವಿಷಮ ಶೀತ ಜ್ವರ, ಮಲೇರಿಯಾದಂತಹ ಇತರ ರೋಗಕ್ಕೆ ತುತ್ತಾಗಿ, ಭಯಂಕರ ಯಲ್ಲಾಪುರಂನಂತಹ ಜ್ವರಕ್ಕೆ ತುತ್ತಾಗಿ ಹೆಚ್ಚು ವರ್ಷ ಬದುಕಲಾಗದೆ, ಸರ್ವೆಗೇ ತಮ್ಮ ಜೀವನವನ್ನು ಮುಡುಪಾಗಿಟ್ಟು, ಸರ್ವೆಯ ಸಂದರ್ಭದಲ್ಲಿ ಕಣಿವೆ, ಅರಣ್ಯ, ಬೆಟ್ಟ, ಇತರ ಪ್ರದೇಶಗಳನ್ನು ಲೆಕ್ಕಿಸದೆ, ಬಿಸಿಲು, ಮಳೆ, ಮಂಜು, ಚಳಿ, ಕಾಡುಪ್ರಾಣಿಗಳ ಕಾಟ, ಕ್ರಿಮೀಕೀಟಗಳ ಕಾಟ, ಹಾಗು ಎಲ್ಲಂದರಲ್ಲೇ ಟೆಂಟ್ ಹಾಕಿ ಸರಿಯಾಗಿ ನಿದ್ದೆ ಮಾಡದೆ, ಸಮಯಕ್ಕೆ ಸರಿಯಾಗಿ ಆಹಾರವಿಲ್ಲದೇ ಬರೀ ಉಪಕರಣಗಳನ್ನು ಸಾಗಿಸುವುದು, ಅಳೆಯುವುದೇ ತಮ್ಮ ಜೀವನೋಧ್ಯಾಯವನ್ನಿಟ್ಟುಕೊಂಡ ಈ ಎಲ್ಲರ ಸಾಧನೆಯನ್ನು ಮೆಚ್ಚಬೇಕಾದದ್ದೆ. ಇಂಗ್ಲೆಂಡ್ ದೇಶವನ್ನು ತೊರೆದು ಭಾರತಕ್ಕೆ ಬಂದು ಇಷ್ಟೆಲ್ಲಾ ಕಷ್ಟಾಪಟ್ಟು ಅಳೆಯುವುದಾದರು ಏಕೆ? ಕೆಲವರಿಗೆ ಆ ಸಾಧನೆಯೇ ಮುಖ್ಯ, ಅದರಲ್ಲೂ ಮಾಂಟ್ಗೋಮಾರಿ ತನ್ನ ಜೀವನವನ್ನೇ ಪಣಕ್ಕಿಟ್ಟು ಎಲ್ಲರನ್ನು ಪ್ರೋತ್ಸಾಹಿಸುತ್ತಾ ಎಲ್ಲರಿಗೂ ಮಾರ್ಗದರ್ಶಕರಾಗುತ್ತಾರೆ.
ಈ ಕಾರ್ಯದಲ್ಲಿ ಭಾರತೀಯರಲ್ಲಿ ರಾಧಾನಾತ್ ಸಿಕ್ದರ್ , ನೈನ್ ಸಿಂಗ್ ನಂತಹ ಕೆಲವರನ್ನು ಗುರುತಿಸಿ, ಅವರು ಕಠಿಣ ಪರಿಶ್ರಮಿಗಳೆಂದು ತಿಳಿದು ಅಗ್ಗದ ವೇತನಕ್ಕೆ ಅವರನ್ನು ಆಯ್ಕೆ ಮಾಡಿ ಇತರೆ ಸೌಲಭ್ಯಗಳನ್ನು ಒದಗಿಸದೆ ಬ್ರಿಟೀಷ್ ಅಧಿಕಾರಿಗಳಿಗೆ ಹೆಚ್ಚಿನ ವೇತನ ಹಾಗು ಸೌಲಭ್ಯವನ್ನು ಒದಗಿಸುವ ಬ್ರಿಟೀಷ್ ಸರಕಾರದ ದುರ್ಬುದ್ಧಿ ಮಾಂಟ್ಗೋಮಾರಿಗೆ ಇಷ್ಟವಾಗದೇ ಇದ್ದರೂ ತಾನು ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕನ್ಯಾಕುಮಾರಿ, ತಂಜಾವೂರಿನಿಂದ ಮಸ್ಸೂರಿಯವರಗೆ ಬೇಸ್ಲೇನ್ ಅಳೆದು, ಸುತ್ತಮುತ್ತಲ ತ್ರಿಕೋನ ರಚಿಸುತ್ತಾ ಸಾಗುವ ಸರ್ವೆ ಒಬ್ಬರಿಂದಾಗುವ ಕೆಲಸವಲ್ಲ, ಲ್ಯಾಂಬ್ಟನ್, ಎವರೆಸ್ಟ್, ಕರ್ನಲ್ ವಾ, ಮಾಂಟ್ಗೋಮಾರಿ, ಜಾನ್ಸನ್ ರವರ ಪರಿಶ್ರಮದಿಂದ ಮುಕ್ತಾಯಗೊಳ್ಳುತ್ತದೆ. ತೋಟ, ಬೆಟ್ಟ, ಗುಡಿ ಗೋಪುರ, ಕಾಡು, ಇನ್ನೂ ಇತರೆ ಪ್ರದೇಶದಲ್ಲಿ ಬೇಸ್ಲೇನ್ ಅಳೆದು ತ್ರಿಕೋನ ರಚಿಸುತ್ತಾ ಅಳೆಯುತ್ತಾ ಹೋಗಿ ಮಸ್ಸೂರಿ ಮುಟ್ಟಲು ಹಲವಾರು ವರ್ಷಗಳೇ ಬೇಕಾಗುತ್ತದೆ. ಪೀಕ್ ೧೬ ಸಿಕ್ದರ್ ರವರ ಗಣಿತ ಸೂತ್ರಗಳಿಂದ ೨೯೦೦೦ ಅಡಿಯ ಶಿಖರವನ್ನು ಮೌಂಟ್ ಎವರೆಸ್ಟ್ ಎಂದು ಎವರೆಸ್ಟ್ ನೆನಪಿನಲ್ಲಿ ನಾಮಕರಣ ಮಾಡಲಾಗುತ್ತದೆ. ಮೊದಲು ಭಾರತೀಯರ ಕೋಲಳತೆ, ಅಂಗುಲ, ಅಡಿ ಇವುಗಳನ್ನು ಬಿಟ್ಟು ತಮ್ಮದೇ ಆದ ಯಾರ್ಡ್, ಫರ್ಲಾಂಗ್ ಎಂಬ ಅಳೆತೆಯ ಮಾದರಿಗಳನ್ನು ಮುಂದಿಟ್ಟುಕೊಂಡು ಮಾಪನಕ್ಕಿಳಿದು, ಕಡೆಯಲ್ಲಿ ನೈನ್ ಸಿಂಗ್ ಹೆಜ್ಜೆಯ ಲೆಕ್ಕವನ್ನೇ ಆಧಾರವಿಟ್ಟುಕೊಂಡೇ ಲ್ಹಾಸಾ ನಗರದ ದೂರವನ್ನು ಲೆಕ್ಕಹಾಕಿದ್ದು. ಓಂ ಮಣಿ ಪದ್ಮೇ ಹಂ ಎಂದು ಹೆಜ್ಜೆ ಹೆಜ್ಜೆಗೂ ಲೆಕ್ಕ ಮಾಡುತ್ತಾ ಒಂದೇ ಅಳತೆಯ ಹೆಜ್ಜೆಯನ್ನಿಡುತ್ತಾ ಭಾರತದ ಡೆಹರಾಡೂನಿನಿಂದ ಲ್ಹಾಸಾದವರೆಗೆ ಮೂವತ್ತೆರಡು ಲಕ್ಷ ಹೆಜ್ಜಗಳನ್ನಿಟ್ಟ ನೈನ್ ಸಿಂಗ್ ವ್ಯಕ್ತಿತ್ವವು ಇಷ್ಟವಾಗುತ್ತದೆ, ಆತನ ಬಡತನವೇ ಆತನಗೆ ಗುರಿಮುಟ್ಟಲು ಸಾಧ್ಯವಾಗುತ್ತದೆ. ಆದರೆ ಆತನ ಸಾಧನೆಯನ್ನು ಬ್ರಿಟೀಷ್ ಸರ್ಕಾರವು ಮುಚ್ಚಿಡಲು ಪ್ರಯತ್ನಿಸಿದಾಗ ಮಾಂಟ್ಗೋಮಾರಿ ಕಷ್ಟಪಟ್ಟು ಆತನ ಸಾಧನೆಗೆ ತಕ್ಕ ಬಿರುದು ದೊರಕಿಸಿಕೊಡುವುದರಲ್ಲಿ ಯಶಸ್ವಿಯಾಗುವ ಮಾಂಟ್ಗೋಮಾರಿ ವ್ಯಕ್ತಿತ್ವದಿಂದ ನಮ್ಮ ಮನಸ್ಸನ್ನು ಗೆಲ್ಲುತ್ತಾರೆ.
ಕೊನೆಯಲ್ಲಿ ಬರುವ ಸಾಲುಗಳಂತೂ ಅತ್ಯದ್ಭುತ * ನಾವು ತಾನೇ ಭಾರತಕ್ಕೆ ಸರಪಣಿ ಕೊಂಡೊಯ್ದದ್ದು, ಆಳುವುದಕ್ಕೂ ಸರಪಣಿ, ಅಳೆಯುವುದಕ್ಕೂ ಸರಪಣಿ. ಅವರ ಪರಂಪರಾಗತ ಗಣಿತ ಸರಪಣಿಯನ್ನು ತುಂಡಾಗಿಸಿ ನಮ್ಮ ಲೆಕ್ಕದ ಸರಪಣಿಯನ್ನು ಪೋಣಿಸಿದೆವು. ಕೊರಳೊಡ್ಡಿದವು ಮೂಕಪಶುಗಳು. ನಾವು ಬಿಗಿದೆಳದೆವು ಸರಪಣಿಯನ್ನು, ಮಾಂಟ್ಗೋಮಾರಿಯ ಕಣ್ಣು ಮಂಜಾಯಿತು, ದೃಷ್ಟಿ ಕತ್ತಲೆಯಾಯಿತು, ಎಲ್ಲವೂ ಮಸುಕಾಯಿತು*
Prameya" by Dr. Gajanana Sharma is a rare gem, blending real accounts with imaginative narratives to depict the remarkable Trigonometric Survey of India and its historical context. While it didn't captivate me as much as Sharma's previous works, it sheds light on both the positive and negative aspects of Indian and British characters. Exploring lesser-known history originating from Mysore state, it provided a thought-provoking read overall.
'ಪ್ರಮೇಯ' ಭಾರತದ ಮಹಾಮಾಪನದ ಕಥೆ - ಅಂದರೆ ಬ್ರಿಟಿಷರು ಭಾರತವನ್ನು ಅಳೆದ "ದಿ ಗ್ರೇಟ್ ಟ್ರಿಗ್ನೋಮೆಟ್ರಿಕ್ ಸರ್ವೆ" ಬಗ್ಗೆ ಹೇಳುತ್ತದೆ. ಇಂಥ ವಿಷಯವನ್ನು ಕನ್ನಡದಲ್ಲಿ ಮೊದಲ ಬಾರಿಗೆ ಕಾದಂಬರಿ ರೂಪದಲ್ಲಿ ಬರೆದಿರುವುದು ಒಳ್ಳೆಯ ವಿಚಾರ.
ಪುಸ್ತಕದ ಮೊದಲ 90 ಪುಟಗಳು ನಿಜಕ್ಕೂ ಚೆನ್ನಾಗಿದ್ದವು. ಲೇಖಕರು ಎಷ್ಟು ಅಧ್ಯಯನ ಮಾಡಿದ್ದಾರೆ ಅನ್ನೋದು ಕಾಣ್ತಾ ಇದೆ. ಆದ್ರೆ ನಂತರ ಪುಸ್ತಕ ಸ್ವಲ್ಪ ನಿಧಾನವಾಗ್ತಾ ಹೋಯಿತು. ಬಹಳಷ್ಟು ಹೆಸರುಗಳು, ಸ್ಥಳಗಳು, ಘಟನೆಗಳು ಒಟ್ಟಿಗೆ ಬರೋದರಿಂದ ಕೆಲವೊಮ್ಮೆ ತಲೆ ತಿರುಗಿಸಿಬಿಡುತ್ತೆ. ಮತ್ತೆ ಕೆಲವು ಕಡೆ ಅನಗತ್ಯವಾಗಿ ವಿಷಯ ಎಳೆದಂತೆ ಅನ್ನಿಸ್ತು.
ಇತಿಹಾಸ ಇಷ್ಟ ಇದ್ದವರಿಗೆ ಈ ಪುಸ್ತಕ ತುಂಬಾ ಇಷ್ಟವಾಗಬಹುದು. ಯಾಕಂದ್ರೆ ಲೇಖಕರು ಬ್ರಿಟಿಷರು ಮತ್ತು ಭಾರತೀಯರ ಎರಡೂ ಬಗೆಯ ಗುಣಗಳನ್ನು ತೋರಿಸಿದ್ದಾರೆ - ಒಳ್ಳೆಯದು-ಕೆಟ್ಟದ್ದು ಎರಡನ್ನೂ. ಆದ್ರೆ ಇತಿಹಾಸದಲ್ಲಿ ಆಸಕ್ತಿ ಇಲ್ಲದವರಿಗೆ ಇದು ಬೇಸರ ತರಬಹುದು.
ಗಜಾನನ ಶರ್ಮರ ಹಿಂದಿನ ಕಾದಂಬರಿಗಳಾದ 'ಪುನರ್ವಸು' ಮತ್ತು 'ಚೆನ್ನಭೈರಾದೇವಿ' ಅಷ್ಟು ಈ ಕಾದಂಬರಿ ನನ್ನನ್ನು ಸೆಳೆಯಲಿಲ್ಲ. ಆದರೂ ನಮ್ಮ ದೇಶದ ಮರೆತುಹೋದ ಇತಿಹಾಸದ ಒಂದು ಪುಟವನ್ನು ನಮಗೆ ತೋರಿಸಿದ್ದಾರೆ ಅನ್ನೋದು ಒಳ್ಳೆಯ ವಿಷಯ. ಸರ್ವೆ, ಅಳತೆ ಇಂಥ ತಾಂತ್ರಿಕ ವಿಷಯಗಳನ್ನು ಕಾದಂಬರಿಯಾಗಿ ಬರೆಯೋದು ಸುಲಭವಲ್ಲ, ಅದನ್ನು ಪ್ರಯತ್ನಿಸಿದ್ದಾರೆ.
ಇದು ಭಾರತದ ಟ್ರಿಗ್ನೊಮೆಟ್ರಿಕಲ್ ಸರ್ವೆ ಮಾಡುತ್ತಾ ಮದ್ರಾಸ್ ನಿಂದ ಕಾಶ್ಮೀರದ ವರೆಗಿನ ಭೌಗೋಳಿಕ ಸೌಂದರ್ಯವನ್ನು ತಿಳಿಸಿದ ಕಥೆ.. ಸಹೃದಯಿ ಲ್ಯಾಂಬಟನ್, ಶಿಸ್ತಿನ ಎವರೆಸ್ಟ್, ಭಾರತೀಯರನ್ನು ಪ್ರೀತಿಸಿದ ಮಾಂಟ್ಗೋಮರಿ ಮುಂತಾದ ಬ್ರಿಟಿಷ್ ಸರ್ವೆ ಅಧಿಕಾರಿಗಳ ಕಥೆ.. ಜಗತ್ತಿನ ಅತಿ ಎತ್ತರದ ಪರ್ವತವನ್ನು ಅಳೆದು, ಅದಕ್ಕೆ ಮೌಂಟ್ ಎವರೆಸ್ಟ್ ಎಂಬ ಹೆಸರನ್ನಿಟ್ಟ ಕಥೆ.. ದಿ ಗ್ರೇಟ್ ಮೆರಿಡಿಯನ್ ಆರ್ಕ್ ಅನ್ನು ಅಳೆಯುತ್ತಾ ಮದ್ರಾಸು, ಮೈಸೂರು, ಗೋದಾವರಿ ತೀರ, ಮುಂಬಯಿ, ಕೋಲ್ಕತಾ, ಮಧ್ಯ ಭಾರತ, ಪಂಜಾಬ್ , ಸಿಕ್ಕಿಂ, ಲಡಾಕ್ ಪ್ರಾಂತ್ಯಗಳಲ್ಲಿ ೧೯ ನೇ ಶತಮಾನದಲ್ಲಿ ಬ್ರಿಟಿಷ್ ಆಳ್ವಿಕೆಯ ನೈಜತೆಯನ್ನು ತೆರೆದಿಡುವ ಕಥೆ.. ವಾಂಗಟ್ ನದಿ ತೀರದ ಕುಂದನ್ ಗ್ರಾಮದ ಪಂಡಿತರ ಜೀವನವನ್ನು ಚಿತ್ರಿಸುತ್ತಾ ಕಶ್ಯಪಮಾರ್ ಕಾಶ್ಮೀರವಾಗಿ ಬದಲಾದ ಕಥೆ.. ಬರಿ ಕಾಲ್ನಡಗೆಯಲ್ಲೇ ಇಡೀ ಟಿಬೆಟ್ ಅಳೆದು, ಸಾಂಗ್ಪೋ ನದಿಯೇ ಬ್ರಹ್ಮಪುತ್ರ ಎಂದು ಜಗತ್ತಿಗೆ ತೋರಿಸಿದ ನೈನ್ ಸಿಂಗ್ ಎಂಬ ಅಧ್ಬುತ ಅನ್ವೇಷಕನ ಕಥೆ.. ಇದು ಮಾನವ ಕುಲದ ಒಂದು ಅತಿ ದೊಡ್ಡ ವೈಜ್ಞಾನಿಕ ಪ್ರಯತ್ನದ ಕಥೆ.. ಇದು ಆಳಿದವರ ಕಥೆಯಲ್ಲ, ಅಳೆದವರ ಕಥೆ..