ಯುದ್ಧ, ಶಾಂತಿ ಮತ್ತು ಸೈಕಲ್ ಗ್ಯಾಪ್

ಮನುಷ್ಯ ಯುದ್ಧವಿಲ್ಲದೆ ಬದುಕುತ್ತಾನೆ ಅನ್ನಿಸುತ್ತಾ!? ಅವನ ಹುಟ್ಟುಗುಣದಲ್ಲೇ ಅದಿಲ್ಲ. ಅವನಿಗೆ ಯುದ್ಧ ಬೇಕು, ಪ್ರಪಂಚದ ಇತಿಹಾಸದಲ್ಲಿ ಎಷ್ಟು ಅವಧಿಯ ಕಾಲ ಮನುಷ್ಯ ಹೊಡೆದಾಟ ಮಾಡದೇ, ಶಾಂತಿಯಿಂದ, ಎಲ್ಲರಿಗೂ ಮುತ್ತಿಟ್ಟುಕೊಂಡು ಬದುಕಿದ್ದಾನೆ? ನಮ್ಮ ನಮ್ಮನ್ನೇ ನೋಡಿಕೊಳ್ಳಿ, ಕನ್ನಡಿಯಲ್ಲಿ ಸರಿಯಾಗಿ ನೋಡಿಕೊಳ್ಳಿ. ಹಿಂದಿನ ದಿನ ಶಾಂತಿ ಎನ್ನುತ್ತೇವೆ, ಮರುದಿನ ವ್ಹಾ ವ್ಹಾ ನಮ್ಮ ಸೈನ್ಯ ನಮ್ಮ ಹೆಮ್ಮೆ ಎನ್ನುತ್ತೇವೆ, ಮತ್ತೆ ಮರುದಿನ ರಕ್ತ ನೋಡಿದ ತಕ್ಷಣ ಅಯ್ಯೋ ಬೇಡಪ್ಪ ಯುದ್ಧ ಅನ್ನುತ್ತೇವೆ. ಮನುಷ್ಯನಲ್ಲಿ ಸುಪ್ತವಾಗಿ ಕ್ರೌರ್ಯ ಇದ್ದೇ ಇದೆ. ಅಪ್ರಯತ್ನ ಪೂರ್ವಕವಾಗಿ ಅದು ಹೊರಗೆ ಬಂದುಬಿಡುತ್ತದೆ. ಶಾಂತಿ ಎಂಬುದು ನಾಗರೀಕ ಮನುಷ್ಯ ಕಾಲಾಕಾಲಾದಿಂದ ರೂಢಿಸಿಕೊಳ್ಳಲು ಯತ್ನಿಸುತ್ತಿರುವ ಆದರ್ಶವೇ ಹೊರತು ವಾಸ್ತವವಲ್ಲ. ಯುದ್ಧದ ಉನ್ಮಾದ ನಮ್ಮಲ್ಲಿ ಇದೆ, ಶಾಂತಿ ಬೇಕೆನ್ನುವ ಹಿತವಾದವು ಇದೆ. ಸಮಯಾಸಮಯಕ್ಕೆ ನಾವು ಯುದ್ಧ ಮತ್ತು ಶಾಂತಿಯನ್ನು ನಮ್ಮ ಹಿತಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುತ್ತೇವೆ ಹೊರತು ನಾವು ಹೊಡೆದಾಟ ಪ್ರಿಯರೇ! ಬುದ್ಧ, ಗಾಂಧಿ, ಮತ್ತೊಬ್ಬನೂ ಇದಕ್ಕೆ ಹೊರತಲ್ಲ. ಆದರೆ ಅವರ ಇರುವು ಬಹುಮುಖ್ಯ. ಶಾಂತಿದೂತರು ಆಗಾಗ ಹುಟ್ಟಬೇಕು, ಶಾಂತಿಯ ಮಾತಾಡುವವರು ಇರಬೇಕು... ಶಾಂತಿ ಸ್ಥಾಪನೆಯಾಗುತ್ತದೆ ಎಂದಲ್ಲ, ಯುದ್ಧದ ತೀವ್ರತೆಯನ್ನು ಹತೋಟಿಯಲ್ಲಿಡಲು ಅಷ್ಟೇ. ಪಿತ್ತ ನೆತ್ತಿಗೇರಿದಾದ ಮಾತ್ರ ನಿಂಬೆಹಣ್ಣನ್ನು ತಲೆಗೆ ತಿಕ್ಕುವಂತೆ.

ಇಲ್ಲೊಂದು ಸೂಕ್ಷ್ಮವಿದೆ, ಯುದ್ಧ ಎನ್ನುವ ಮನುಷ್ಯ ಸಹಜ ಜಾತಗುಣಕ್ಕೂ, ಶಾಂತಿ ಎಂಬುವ ಮನುಷ್ಯ ನಿರ್ಮಿತ ಆದರ್ಶದ ನಡುವೆ ಸಣ್ಣ ಅಂತರವಿದೆ. ಅದನ್ನು ಆಡುಭಾಷೆಯಲ್ಲಿ ಸೈಕಲ್ ಗ್ಯಾಪ್ ಎನ್ನುತ್ತಾರೆ ಅದು ಮನುಷ್ಯನ ವ್ಯವಹಾರ ವಿಟತ್ವ. ಪ್ರಪಂಚದ ಮುಂದಿನ ದಿನಗಳಲ್ಲಿ ಈ ಗ್ಯಾಪ್ ದೊಡ್ಡದಾಗುತ್ತದೆ. ಈ ಅಂತರ ದೊಡ್ಡದಾದಷ್ಟು ಯುದ್ಧವೂ ಕಡಿಮೆಯಾಗುತ್ತದೆ, ಶಾಂತಿಯೂ ಕಡಿಮೆಯಾಗುತ್ತದೆ! ಈ ಅಂತರವನ್ನು ವ್ಯವಹಾರ ವಿಟರು ಆಳುತ್ತಾರೆ. ಅವರೇ ಯುದ್ಧವನ್ನು, ಶಾಂತಿಯನ್ನು ನಿಯಂತ್ರಿಸುತ್ತಾರೆ.

ಲೋಭಿಯಾದ ಮನುಷ್ಯ ತನ್ನ ಸುಖವನ್ನು ಹೇಗೆ ಗಿಟ್ಟಿಸಿಕೊಳ್ಳಬಹುದು ಎಂತಲೇ ನೋಡುತ್ತಿರುತ್ತಾನೆ. ಹಣ, ಮೈಥುನ, ಹಿತ ವಸ್ತು ಖರೀದಿ, ಸಂಸಾರ ವೃದ್ಧಿ, ಸಂಸಾರ ಪೋಷಣೆ ಇವೆಲ್ಲಾ ಲೋಭಿತನದ ಪ್ರಾಥಮಿಕತೆಗೆ ಸೇರುವುದು. "ಅಧಿಕಾರ" ಎಂಬುದಿದೆಯೆಲ್ಲಾ ಅದು ಲೋಭದ ಕೊನೆಯ ಮಟ್ಟ. ತನ್ನ ಅಡಿಯಲ್ಲಿ ಎಲ್ಲ ಇರಬೇಕು ಎಂಬ ಅಹಂಕಾರಕ್ಕಿಂತ ದೊಡ್ಡ ಲೋಭ ಮತ್ತೊಂದಿಲ್ಲ. ಈಗಿನ ದಿನಮಾನದಲ್ಲಿ ಸನ್ಯಾಸಿ; ಎಲ್ಲ ಬಿಟ್ಟವನು ಅವನಿಗೆಂತ ಆಸೆ? ಮಕ್ಕಳು ಮರಿ ಇಲ್ಲದವನು ಅವನಿಗೆಂತ ಆಸೆ? ಎಂದುಬಿಡುತ್ತೇವೆ. ಎಂಥಾ ಸಾಮಾನ್ಯ ಸನ್ಯಾಸಿಗೂ, ತನ್ನನ್ನು ಎಲ್ಲರೂ ಪೂಜ್ಯ ಎನ್ನಬೇಕು, ನಾನು ಅಭಯಹಸ್ತ ಹಿಡಿದಾಗ ಕಾಲು ಮುಗಿಯಬೇಕು ಎಂಬ ಆಸೆ ಇರುತ್ತದೆ, ಇನ್ನು ಅದಕ್ಕೊಂದು ಸುವ್ಯವಸ್ಥಿತ ಕೇಂದ್ರವಿದ್ದರಂತೂ ಅಧಿಪತ್ಯದ ಅಲೋಚನೆ. ಲೋಭ ಎಂದರೆ ಕೇವಲ ಮೈಥುನ ಮಟ್ಟದ್ದು ಎಂದುಕೊಳ್ಳುವುದು ಎಳಸು ಚಿಂತನೆ. ದೇಶದ ಗದ್ದುಗೆ ಏರಿ, ತನ್ನ ಹೆಸರು ಇತಿಹಾಸ ಪುಟದಲ್ಲಿ ರಾರಾಜಿಸಬೇಕು, ಸಕಲ ಜನಸ್ತೋಮ ತನ್ನಡಿಯಲ್ಲಿ ಇರಬೇಕು ಎಂಬ ಲೋಭ; ಹೆಂಡತಿ, ಮಕ್ಕಳಿಗೆ ಹಣ ಮಾಡಬೇಕು ಎಂಬ ಲೋಭಕ್ಕಿಂತ ಅತಿ ಹೆಚ್ಚಿನ ವಿಟತ್ವ ಹೊಂದಿರುತ್ತದೆ. ಅದೊಂದು ರೀತಿ ಅಮಲು. ಇಡೀ ಜಗತ್ತಿನಲ್ಲಿ ಮನುಷ್ಯನೊಬ್ಬನೇ ಬದುಕಬೇಕು ಸಕಲ ಇನ್ನಿತರ ಪ್ರಾಣಿ ತನ್ನಡಿ ಎಂಬ ಅಧಿಕಾರ ಚಲಾವಣೆ ಇದೆಯೆಲ್ಲಾ ಅದೂ ಇದೆ. ಅಧಿಕಾರ ಭಾವವೇ ಯುದ್ಧವನ್ನು ನಿರ್ಣಯಿಸುವುದಿಲ್ಲವೇ. ಒಂದು ದಾಯಾದಿ ಕಲಹಕ್ಕಾಗಿ, ಒಂದು ಜಾಗದ ಮೇಲಿನ ಅಧಿಕಾರಕ್ಕಾಗಿ ಸಕಲ ಆರ್ಯಾವರ್ತದ ರಾಜರು ಹೊಡೆದಾಡಿ ಸತ್ತದ್ದನ್ನು ಮಹಾಕಾವ್ಯಗಳಲ್ಲಿ ಓದಿ ಬೆಳೆದ ಜನರಲ್ಲವೇ ನಾವು. ಇದು ಬೇಗನೇ ಅರ್ಥವಾಗಬೇಕು.

ಎಲ್ಲೆಡೆ ಶಾಂತಿ ಒದಗಿತು ಎಂದಿಟ್ಟುಕೊಳ್ಳಿ ಆಗ ಶಸ್ತ್ರಾಸ್ತ್ರ ಮಾರಾಟ ಮಾಡುವವರು ಏನು ಮಾಡಬೇಕು? ಎಲ್ಲರೂ ನೆಮ್ಮದಿ ಇಂದಿದ್ದರೆ ಯಾವ ವಿಚಾರ ಇಟ್ಟು ಒಬ್ಬನನ್ನು ಇಳಿಸಿ ಇನ್ನೊಬ್ಬ ಗದ್ದುಗೆ ಏರಬಹುದು? ಯಾರೂ ಜಗಳ ಮಾಡದೇ ಮುತ್ತಿಟ್ಟುಕೊಂಡಿದ್ದರೆ ತಾನು ನಂಬಿದ ಮತದ ಅಸ್ತಿತ್ವ ಏನಾಗಬೇಕು? ಆದ್ದರಿಂದ ಜಗತ್ತಿನ ವ್ಯವಹಾರ ನಡೆಯಬೇಕಾದರೆ ಶಾಂತಿ ಇರಬಾರದು. ಇದೇ ವ್ಯವಹಾರ ವಿಟರ ಮೂಲ ಮಂತ್ರ. ಜನರಲ್ಲಿ ಅಭದ್ರತೆ ಹೆಚ್ಚಾದಷ್ಟು ವ್ಯವಹಾರ ಕುದುರುತ್ತದೆ. ಯುದ್ಧಕ್ಕೆ ಪೋಷಣೆ ಕೊಡುವುದು, ಅದು ತೀರಾ ಹೆಚ್ಚಾಗಿ ವ್ಯವಹಾರ ವಿಟತ್ವದ ಸೈಕಲ್ ಗ್ಯಾಪನ್ನೆ ಆಕ್ರಮಿಸುತ್ತಿದೆ ಎಂದಾಗ ಶಾಂತಿಯನ್ನು ಪೋಷಣೆ ಮಾಡುವುದು. ಬೇಕಿದ್ದರೆ ಗಮನಿಸಿ ಯಾವ ಯುದ್ಧವೂ ದೀರ್ಘಕಾಲ ನಡೆದು ಇಡೀ ಜಗತ್ತು ಸರ್ವನಾಶವಾದ ಉದಾಹರಣೆ ಇಲ್ಲ. ವ್ಯವಹಾರ ವಿಟರಿಗೆ ಗೊತ್ತು ಯಾವಾಗ ಯುದ್ಧ ನಿಲ್ಲಿಸಬೇಕು, ಯಾವಾಗ ಶಾಂತಿ ಹೊರಡಿಸಬೇಕು ಎಂದು.

ಪ್ರಸ್ತುತ ಜಗತ್ತು ಪೂರ್ಣ ವ್ಯವಹಾರದ ಮೇಲೆ ನಿಂತಿದೆ. ದೇಶ-ದೇಶ, ಮನುಷ್ಯ-ಮನುಷ್ಯ ಅನುಮತಿಯಿಲ್ಲದೆ ಯುದ್ಧವಾಡುವಂತೆಯೂ ಇಲ್ಲ, ಶಾಂತಿ ಒಪ್ಪಂದ ಮಾಡುವಂತೆಯೂ ಇಲ್ಲ. ಜಗತ್ತನ್ನು ಎದುರುಹಾಕಿಕೊಂಡು ಬದುಕಬಹುದು, ವ್ಯವಹಾರವನ್ನು ಎದುರುಹಾಕಿಕೊಂಡು ಬದುಕಲಿಕ್ಕೆ ಆಗುವುದಿಲ್ಲ ಅಲ್ಲವೇ? ನಾವು ಗೊತ್ತಿದ್ದೋ ಗೊತ್ತಿಲ್ಲದೆಯೂ ಇನ್ನೊಬ್ಬರ ಕೈಗೊಂಬೆಗಳು. ದೈವವಶಾತ್ ಎಲ್ಲೆಡೆಯೂ ಶಾಂತಿ ಕೂಡಿ, ಯುದ್ದವಿಲ್ಲ ಎಂದಿಟ್ಟುಕೊಳ್ಳಿ... ಸುಖ ಹೆಚ್ಚಾಗಿ ತಮಗೆ ಮಾರಿದ ಟೂಥ್ ಪೇಸ್ಟಲ್ಲಿ ೧ಮಿಲಿಗ್ರಾಂ ಕಡಿಮೆ ಬಂದಿದೆ ಎಂದು ಉಗ್ರಹೋರಾಟ ಮಾಡಿ, ಅದನ್ನು ಜಾಗತಿಕ ಸಮಸ್ಯೆ ಎಂಬಂತೆ ಬಿಂಬಿಸುತ್ತಾರೆ. ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ತೊಂದರೆ ಎಂದರೆ ಇದೆ! ಇದೆಲ್ಲಾ ಪುರಾಣ ಬೇಡ ಈಗ ಯುದ್ಧಾ ಬೇಕೋ? ಶಾಂತಿ ಆಗಬೇಕೋ... ಅಷ್ಟು ಹೇಳಿ ಸಾಕು ಎಂದರೆ... ನಿಮ್ಮ ವೈಯಕ್ತಿಕ ಹಿತಕ್ಕೆ ಯಾವುದು ಧಕ್ಕೆ ಮಾಡುವುದಿಲ್ಲವೋ ಅದನ್ನು ಆಯ್ಕೆ ಮಾಡಿಕೊಳ್ಳಿ ಎನ್ನಬೇಕಾಗುತ್ತದೆ. ಅದನ್ನೇ ತಾನೇ ಜೀವನದುದ್ದಕ್ಕೂ ನಾವು ಮಾಡಿರುವುದು.
3 likes ·   •  0 comments  •  flag
Share on Twitter
Published on February 27, 2019 23:44
No comments have been added yet.